ರಾಜ್ಯಾದ್ಯಂತ ವಿಶ್ವಹಿಂದೂ ಪರಿಷದ್ ನೇತೃತ್ವದಲ್ಲಿ ‘ಹಿಂದೂ ಮಹಿಳಾ ಸಹಾಯವಾಣಿ-8884437733’ ಪ್ರಾರಂಭ
Saturday, August 1, 2026
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇಡೀ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯ, ಕಿರುಕುಳ ಹಾಗೂ ವಂಚನೆಯ ಘಟನೆಗಳು ಹೆಚ್ಚಾಗುತ್ತಿದ್ದು, ಇಂತಹ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಹಿಂದೂ ಮಹಿಳೆಗೆ ತಕ್ಷಣದ ಕಾನೂನು, ಮಾನಸಿಕ, ವೈದ್ಯಕೀಯ ಮತ್ತು ಸಾಮಾಜಿಕ ನೆರವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉನ್ನತ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಕರ್ನಾಟಕವು ರಾಜ್ಯಮಟ್ಟದ ‘ಹಿಂದೂ ಮಹಿಳಾ ಸಹಾಯವಾಣಿ (8884437733)’ ಯೋಜನೆಯನ್ನು ಧರ್ಮಶ್ರೀ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯ ಬೆಂಗಳೂರುನಲ್ಲಿ ಇಂದು ಅಧಿಕೃತವಾಗಿ ಪ್ರಾರಂಭಿಸಿದೆ.
ಇಂದಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಕೊಲೆ, ಮೋಸ, ಬ್ಲ್ಯಾಕ್ ಮೇಲ್, ಕೌಟುಂಬಿಕ ಹಿಂಸೆ, ಕಚೇರಿ ಹಾಗೂ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ, ಆಮಿಷ ಹಾಗೂ ಬಲವಂತದ ಮತಾಂತರ, ಮಾದಕವಸ್ತು ಜಾಲದಲ್ಲಿ ಮಹಿಳೆಯರ ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ, ಖಾಸಗಿ ಚಿತ್ರಗಳ ದುರ್ಬಳಕೆ ಹಾಗೂ ಮಾನಹಾನಿ, ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣೆ, ಮಾನಸಿಕ ಒತ್ತಡ ಮತ್ತು ಇತರ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅವರ ಜೊತೆ ನಿಲ್ಲಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂಬ ನಿಲುವಿನೊಂದಿಗೆ ಈ ಸಹಾಯವಾಣಿಯನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗಿದೆ.
ಈ ಸಹಾಯವಾಣಿಯಲ್ಲಿ ಮಹಿಳಾ ವಕೀಲರು, ಕ್ರಿಮಿನಲ್ ವಕೀಲರು ಮತ್ತು ಕುಟುಂಬ ಕಾನೂನು ವಕೀಲರು, ಮನೋವೈದ್ಯರು, ಆಪ್ತಸಮಾಲೋಚಕರು, ಸಮಾಜಸೇವಕರು, ವೈದ್ಯರು, ಸೈಬರ್ ಭದ್ರತಾ ತಜ್ಞರು, ಕಾನೂನು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಸುರಕ್ಷಾ ಸಮಿತಿ ರಚಿಸಿ, ಸಹಾಯವಾಣಿಗೆ ಬಂದ ಪ್ರತಿಯೊಂದು ಪ್ರಕರಣವನ್ನು ಜವಾಬ್ದಾರಿಯುತವಾಗಿ ಪರಿಶೀಲಿಸಿ, ಕಾನೂನು ಸಲಹೆ, ಸಮಾಲೋಚನೆ, ಪುನರ್ವಸತಿ ಮತ್ತು ಅಗತ್ಯವಿದ್ದಲ್ಲಿ ಆಸ್ಪತ್ರೆಗಳು, ಆಶ್ರಯಗ್ರಹಗಳು ಹಾಗೂ ಇತರ ಸೇವಾಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ನೆರವು ಒದಗಿಸಲಾಗುತ್ತದೆ.


