ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಉಚಿತ ಕಷಾಯ, ಮೆಂತೆಗಂಜಿ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾಯ೯ಕ್ರಮ

ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಉಚಿತ ಕಷಾಯ, ಮೆಂತೆಗಂಜಿ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾಯ೯ಕ್ರಮ


ಮೂಡುಬಿದಿರೆ: ಆಟಿ ಅಮಾವಾಸ್ಯೆ ಪ್ರಯುಕ್ತ ಸಮ್ಯಕ್ ಕ್ಲಿನಿಕ್ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ ಸಂಪಿಗೆ-ಪುತ್ತಿಗೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಉಚಿತ ಕಷಾಯ, ಮೆಂತೆಗಂಜಿ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು. 


ಡಾ. ಯೋಗಿ ಸುಧಾಕರ್ ತಂತ್ರಿ ಅವರು ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಆಟಿ ಅಮಾವಾಸ್ಯೆಯಂದು ಸೇವಿಸುವ ಪಾಲೆಮರದ ಕೆತ್ತೆಯ ಕಷಾಯಕ್ಕೆ ಆಯುರ್ವೇದದಲ್ಲಿ ವಿಶೇಷ ಮಹತ್ವವಿದ್ದು, ದೇಹದ ಸಪ್ತಧಾತುಗಳ ಶುದ್ಧೀಕರಣಕ್ಕೆ ಸಹಕಾರಿ ಎಂಬ ನಂಬಿಕೆಯಿದೆ. ಆಧುನಿಕ ವಿಜ್ಞಾನದೊಂದಿಗೆ ಆಯುರ್ವೇದದ ಜ್ಞಾನವನ್ನೂ ಗೌರವಿಸಿ ಈ ಪರಂಪರೆಯನ್ನು ಮುಂದುವರಿಸಬೇಕು. ಆಯುರ್ವೇದ ಹಾಗೂ ಆಧುನಿಕ ವೈದ್ಯ ಪದ್ಧತಿಯ ವೈದ್ಯರು ಒಟ್ಟಾಗಿ ಕಷಾಯ ವಿತರಣೆ ಕೈಗೊಂಡಿರುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು. ಮುಂದಿನ ವರ್ಷ ಇನ್ನಷ್ಟು ಹೆಚ್ಚಿನ ಜನರು ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.

ಸಮ್ಯಕ್ ಕ್ಲಿನಿಕ್‌ನ ಡಾ. ಅನುಷಾ ಅಂಬುಜಾ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಗುಣಮಟ್ಟದ ಆಯುರ್ವೇದ ಸೇವೆಗಳನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡಲು ಸಹಕಾರ ಮುಂದುವರಿಸಲಾಗುವುದು ಎಂದರು.

ಆಯುರ್ವೇದ ಪಂಚಕರ್ಮ ಥೆರಪಿಸ್ಟ್ ತಜ್ಞರಾದ ಸೂರ್ಯ ಶೆಟ್ಟಿ ಮಂಗಳೂರು ಮಾತನಾಡಿ, ಆಟಿ ಅಮಾವಾಸ್ಯೆಯಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಆರೋಗ್ಯದ ಕಾಳಜಿಯೂ ಅಡಗಿದೆ. ಇವುಗಳ ಮಹತ್ವವನ್ನು ಇಂದಿನ ಯುವ ಪೀಳಿಗೆಗೂ ತಿಳಿಸುವ ಅಗತ್ಯವಿದೆ ಎಂದರು.

ಪುತ್ತಿಗೆ ಗ್ರಾ.ಪಂ.ನ ಮಾಜಿ ಸದಸ್ಯರಾದ ನಾಗವರ್ಮ ಜೈನ್, ಸಾರಿಕಾ, ಕಳಸಬೈಲು, ಭಜನಾ ತಂಡದ ತರಬೇತುದಾರ ಅಶೋಕ್ ನಾಯ್ಕ್, ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ನಾಯ್ಕ್, ಕಾರ್ಯದರ್ಶಿ ಆನಂದ್, ಸಂಪಿಗೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶುಭಲತಾ ಜಿ., ಹಾಗೂ ಸಂಪಿಗೆಯ ಸಮುದಾಯ ಆರೋಗ್ಯ ಅಧಿಕಾರಿ, ಆಯುಷ್ಮಾನ್ ಆರೋಗ್ಯ ಕೇಂದ್ರದ ವಿದ್ಯಾ ಮಾಲಗೌಡರ್ ಉಪಸ್ಥಿತರಿದ್ದರು. ಲಕ್ಷ್ಮೀ ಭಟ್ ಹಾಗೂ ವಾಹನ ತರಬೇತಿದಾರರಾದ ರಜನಿ ದೇವಾಡಿಗ ಉಪಸ್ಥಿತರಿದ್ದರು.

ಆಟಿ ಅಮಾವಾಸ್ಯೆಯ ಸಂಪ್ರದಾಯ, ಆಯುರ್ವೇದದ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ  ಕಷಾಯ ಹಾಗೂ ಮೆಂತೆಗಂಜಿಯನ್ನು ಉಚಿತವಾಗಿ ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article