ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ), ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-2026’ರ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯು ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್‌ನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.


‘ಡಿಜಿಟಲ್ ಯುಗದಲ್ಲಿ ಗ್ರಂಥಾಲಯದ ಮಹತ್ವ’ ಎಂಬ ವಿಷಯದ ಕುರಿತು ನಡೆದ ಈ ಸ್ಪರ್ಧೆಯಲ್ಲಿ 45 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವೈವಿಧ್ಯಮಯ ವಿಚಾರಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮತ್ತು ಸಂವಹನ ಕಲೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು, ‘ಓದು ಮತ್ತು ಸಂವಹನ ಕಲೆ ಪರಸ್ಪರ ಜೊತೆಯಾಗಿ ಸಾಗುವ ವಿಷಯಗಳಾಗಿವೆ. ವಿದ್ಯಾರ್ಥಿಗಳು ಸೃಜನಶೀಲವಾಗಿ ಬೆಳೆಯುವುದು ಇಂದಿನ ಅಗತ್ಯವಾಗಿದೆ. ಭಾಷಣ ಸ್ಪರ್ಧೆಯು ವಿದ್ಯಾರ್ಥಿಗಳನ್ನು ಕೇವಲ ವಾಗ್ಮಿಗಳನ್ನಾಗಿ ಮಾಡುವುದಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಉತ್ತಮ ವೇದಿಕೆಯಾಗಿಯೂ ರೂಪಗೊಳ್ಳಬೇಕು’ ಎಂದು ಕರೆ ನೀಡಿದರು.


ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಈ ವಿಶೇಷ ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ಕನ್ನಡ ಉಪನ್ಯಾಸಕರಾದ ನೇಮಿಚಂದ್ರ ಗೌಡ ಎಂ. ಮತ್ತು ನಿವೃತ್ತ ಗ್ರಂಥಪಾಲಕರಾದ ರಾಮಚಂದ್ರ ಅವರು ಸಹಕರಿಸಿದರು.

ಸ್ಪರ್ಧೆಯ ಫಲಿತಾಂಶ:

ತೀವ್ರ ಪೈಪೋಟಿಯಿಂದ ನಡೆದ ಈ ಭಾಷಣ ಸ್ಪರ್ಧೆಯಲ್ಲಿ ಅಂತಿಮ ಬಿ.ಎಸ್ಸಿ ವಿಭಾಗದ ವಿಂದ್ಯಾಶ್ರೀ ರೈ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಿ.ಎಸ್ಸಿ ವಿಭಾಗದ ಶ್ರೀವಿದ್ಯಾ ಎನ್. ದ್ವಿತೀಯ ಬಹುಮಾನ ಪಡೆದುಕೊಂಡರು. ಅಂತಿಮ ಬಿ.ಕಾಂ ವಿಭಾಗದ ಲಿಖಿತಾ ಪಿ. ಮತ್ತು ದ್ವಿತೀಯ ಬಿ.ಎಸ್‌ಸಿ. (ಡೇಟಾ ಸೈನ್ಸ್) ವಿಭಾಗದ ಭವಿತ್ ಎ. ತೃತೀಯ ಬಹುಮಾನವನ್ನು ಹಂಚಿಕೊಂಡರು.

ಲಲಿತಕಲಾ ಸಂಘದ ನಿರ್ದೇಶಕ ಪ್ರಶಾಂತ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಅಬ್ದುಲ್ ರೆಹಮಾನ್ ವಂದಿಸಿದರು. ಪ್ರಥಮ ಬಿ.ಬಿ.ಎ ವಿಭಾಗದ ಸನ್ನಿಧಿ ಮತ್ತು ಅಂತಿಮ ಬಿ.ಎಸ್ಸಿ ವಿಭಾಗದ ಮಾನಸ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article