Moodubidire: ಸ್ಪೂರ್ತಿ ಕಲಾ ಸಂಭ್ರಮ-2024 ‘ಸ್ಪೂರ್ತಿ ರತ್ನ’ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಆಶ್ರಯದಲ್ಲಿ ಸ್ಫೂರ್ತಿ ಕಲಾ ಸಂಭ್ರಮ-2024 ಕಾರ್ಯಕ್ರಮವು ಅರಮನೆ ಬಾಗಿಲು ಬಳಿ ಇರುವ ‘ಸ್ಪೂರ್ತಿ ವಿಶೇಷ ಶಾಲೆಯ ಆವರಣದಲ್ಲಿ ನಡೆಯಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಕಲಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇವರ ಮಕ್ಕಳವನ್ನು ನಾವು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಅವರ ಮುಖದಲ್ಲಿ ನಗುವನ್ನು ಕಾಣಬೇಂಕೆಂದು ಬಯಸಿದವರು ಪ್ರಕಾಶ್ ಶೆಟ್ಟಿಗಾರ್ ಅವರು. ಭಿನ್ನ ಸಾಮರ್ಥ್ಯದ ಒಂದು ಮಗುವನ್ನು ನೋಡಿಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ತಿಳಿದುಕೊಂಡರೆ ಅವರಿಗಾಗಿಯೇ ಒಂದು ಶಾಲೆಯನ್ನು ಸ್ವಸಾಮರ್ಥ್ಯದಲ್ಲಿ ಯಾವುದೇ ಶುಲ್ಕವಿಲ್ಲದೆ ನಡೆಸುವುದು ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ದೇವರ ಮಕ್ಕಳ ಈ ಶಾಲೆಗೆ ನಾವೆಲ್ಲರು ನೆರವು ನೀಡುವ ಮೂಲಕ ಶಕ್ತಿ ತುಂಬಿ ಮನೋಧೈರ್ಯವನ್ನು ನೀಡಬೇಕಾಗಿದೆ ಎಂದರು.
ಆಹಾರಮೇಳ, ಹಳ್ಳಿ ಸೊಗಡು, ಹಳ್ಳಿ ಮನೆಮದ್ದು, ಉಡುಪಿ ಕೈಮಗ್ಗ ಸೀರೆ ಸಂಭ್ರಮ, ಕರಕುಶಲ ವಸ್ತುಗಳ ಪ್ರದರ್ಶನ/ಮಾರಾಟ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜಿಸಲಾದ ಕಲಾಸಂಭ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಶ್ವತ್ಥಪುರದ ಲೆಕ್ಸ ಲೈಟ್ಸ್ನ ಆಡಳಿತ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ ಅವರು ಮಾತನಾಡಿ, ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗಿಂತ ವಿಭಿನ್ನವಾಗಿರುವವರು ಭಿನ್ನ ಸಾಮರ್ಥ್ಯದ ಮಕ್ಕಳ ಹಿತಚಿಂತನೆ ಮಾಡಬೇಕಾಗಿದೆ. ನಮ್ಮ ಮನಸ್ಸಿನಲ್ಲಿ ಅವರಿಗೂ ಜಾಗ ನೀಡಬೇಕಾಗಿದೆ. ಋಣಾತ್ಮಕ ಚಿಂತನೆ ಬಿಟ್ಟು ನಾವು ಎಷ್ಟು ಸರಿ ಇದ್ದೇವೆ ಎಂದು ನಮ್ಮೊಳಗೆ ಬೆಳಕು ಹಾಯಿಸಿಕೊಂಡು ತಿಳಿದುಕೊಳ್ಳಬೇಕು. ದೇವರ ಮೇಲೆ ಶ್ರದ್ಧೆ ನಂಬಿಕೆ, ಬದ್ಧತೆಯಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸಲು ಸಾಧ್ಯ ಎಂದವರು ತಿಳಿಸಿದರು.
15 ಸೆಂಟ್ಸ್ ಜಾಗ ಕೊಡುಗೆ:
ಸಂಸ್ಥೆಯ ಪ್ರವರ್ತಕ ಪ್ರಕಾಶ್ ಜೆ. ಶೆಟ್ಟಿಗಾರ್ ಅವರು ತಾನೂ ತನ್ನ ಮಗನೂ ಭಿನ್ನ ಸಾಮರ್ಥ್ಯದವರಾಗಿದ್ದು, ಸಮಾಜದಲ್ಲಿರುವ ಇಂಥವರಿಗಾಗಿ ಶಾಲೆ ತೆರೆದು ಇದುವರೆಗೆ ಯಾವುದೇ ಸರಕಾರಿ ಅನುದಾನವಿಲ್ಲದೆ ಆರು ವರ್ಷ ನಡೆಸಿಕೊಂಡು ಬಂದಿದ್ದು, ಸ್ವಂತ ನೆಲೆ ಕಂಡುಕೊಳ್ಳುವ ಕನಸನ್ನು ಮಂಡಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಅತಿಥಿ, ಉದ್ಯಮಿ ಅಶ್ವಿನ್ ಜೆ. ಪಿರೇರಾ ಅವರು ತಮ್ಮ ಉದ್ಯಮ ಪಾಲುದಾರ ದಿತೇಶ್ ಕುಮಾರ್ ಜೈನ್ ಜತೆಗೂಡಿ 15 ಸೆಂಟ್ಸ್ ಜಾಗವನ್ನು ಅಲಂಗಾರು ಬಳಿ ಕೊಡುಗೆಯಾಗಿ ನೀಡುತ್ತಿರುವುದಾಗಿ ಪ್ರಕಟಿಸಿ, ಉದಾರಿಗಳು ಇನ್ನೂ 8 ಸೆಂಟ್ಸ್ ಜಾಗವನ್ನು ಇದಕ್ಕೆ ಹೊಂದಿಸಿಕೊಡಲು ಮುಂದೆ ಬರಬೇಕು ಎಂದರು.
ಸಮ್ಮಾನ:
ಎಂ.ಆರ್.ಪಿ.ಎಲ್. ಸಂಸ್ಥೆಯ ಸಮೂಹ ಮಾಧ್ಯಮ ಸಲಹೆಗಾರ ಕೃಷ್ಣ ಹೆಗ್ಡೆ ಮಿಯಾರು ಅವರಿಗೆ ‘ಸ್ಪೂರ್ತಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಪೂರ್ತಿ ಸಂಸ್ಥೆಯವರಿಗೆ ಎಂಆರ್ಪಿಎಲ್ನಿಂದ ಮಕ್ಕಳ ವ್ಯಾನ್ ಒಂದನ್ನು ಸಿಆರ್ಎಫ್ನಿಂದ ಒದಗಿಸಲಾಗಿದ್ದು ಈ ಗೌರವವನ್ನು ತನ್ನ ಸಂಸ್ಥೆಗೆ ಸಮರ್ಪಿಸುವುದಾಗಿ ಕೃಷ್ಣ ಹೆಗ್ಡೆ ತಿಳಿಸಿದರು.
ವಕೀಲ, ರಂಗಕರ್ಮಿ ಶಶಿರಾಜ್ ಕಾವೂರು ಅವರು ಸ್ಪೂರ್ತಿಯ ಸ್ವಂತ ಕಟ್ಟಡದ ಕನಸು ನನಸಾಗಲಿ ಎಂದು ಹಾರೈಸಿದರು.
ಫಾರ್ಚ್ಯೂನ್ ಪ್ರೊಮೋರ್ಸ್ನ ಪಾಲುದಾರ ಅಬುಲ್ ಅಲಾ ಪುತ್ತಿಗೆ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶಿಕ್ಷಣ, ಕಲೆ, ಕ್ರೀಡೆಯೊಂದಿಗೆ ವೃತ್ತಿ ಶಿಕ್ಷಣವನ್ನೂ ನೀಡುತ್ತಿರುವುದು ಗಮನಾರ್ಹ ಎಂದರು.
ಟ್ರಸ್ಟಿಗಳಾದ ಪವನ್ ಶೆಟ್ಟಿಗಾರ್, ಪೂಜಿತಾ ಪವನ್, ಉಷಾ ಪ್ರಕಾಶ್ ಶೆಟ್ಟಿಗಾರ್, ಪೋಷಕರ ಸಮಿತಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು. ಬೆಳಗ್ಗೆ ಕೃತಿಕಾ ಮಾಳ, ಸಚಿನ್ ಪೂಜಾರಿ ನಂದಳಿಕೆ ಅವರಿಂದ ಉದಯಗಾನ, ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಸಿದ್ಧಕಟ್ಟೆಯ ತಂಡದಿಂದ ಯಕ್ಷನಾಟ್ಯ, ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ಸ್ಪೂರ್ತಿ ವಿದ್ಯಾರ್ಥಿಗಳಿಂದ ಕೈಮಗ್ಗ ಸೀರೆಯೊಂದಿಗೆ ಸೌಂದರ್ಯ ಸಂಭ್ರಮ, ಕೃತಿಕಾ ಮಾಳ, ಪವನ್ ಕಾರ್ಕಳ ಅವರಿಂದ ಗಾನಕುಂಚ, ಮಧ್ಯಾಹ್ನ ವಾಯ್ಸ್ ಆಫ್ ಆರಾಧನಾ ತಂಡದವರಿಂದ ಸಾಂಸ್ಕೃತಿಕ ನೃತ್ಯ, ಯಕ್ಷನಿಧಿ ಮಕ್ಕಳ ಮೇಳದಿಂದ ಮಹಿಷಮರ್ಧನಿ ಯಕ್ಷಗಾನ, ದೀಪಕ್ ರೈ ಪಾಣಾಜೆ, ಕಲಾಶ್ರೀ ಬೆದ್ರ ತಂಡಗಳಿಂದ ಹಾಸ್ಯ ಕಲಾಪ ನಡೆಯಲಿವೆ. ಉಮೇಶ್ ಕೋಟ್ಯಾನ್ ವಾಮದಪದವು ಬಳಗ ಹಾಗೂ ಸ್ಪೂರ್ತಿ ವಿದ್ಯಾರ್ಥಿಗಳಿಂದ ನೃತ್ಯ-ಗಾನ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಕಾಶ್ ಜೆ. ಶೆಟ್ಟಿಗಾರ್ ಸ್ವಾಗತಿಸಿ, ದಿನೇಶ ರಾಯಿ ನಿರೂಪಿಸಿ, ಪೋಷಕರ ಸಮಿತಿ ಕಾರ್ಯದರ್ಶಿ ದಿವ್ಯಾ ಜ್ಯೋತಿ ವೇಗಸ್ ವಂದಿಸಿದರು.

