Mangalore: ಅಂತರ್ ಕಾಲೇಜು ಚೆಸ್ ಪಂದ್ಯಾಟ-ಉಪ್ಪಿನಂಗಡಿ ಸರ್ಕಾರಿ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನ
ಮಂಗಳೂರು: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ. 28 ರಂದು ನಡೆದ ದೈಹಿಕ ಶಿಕ್ಷಣ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾಟ-2024ರಲ್ಲಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ಬೈಂದೂರಿನ ಸರ್ಕಾರಿ ಕಾಲೇಜು, ತೃತೀಯ ಸ್ಥಾನವನ್ನು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಸರ್ಕಾರಿ ಕಾಲೇಜು, ನಾಲ್ಕನೇ ಸ್ಥಾನವನ್ನು ವಾಮದಪದವು ಸರ್ಕಾರಿ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬೋರ್ಡ್ ಪ್ರಶಸ್ತಿಯಲ್ಲಿ ಪ್ರಥಮ ಬಹುಮಾನವನ್ನು ಬೈಂದೂರು ಸರ್ಕಾರಿ ಕಾಲೇಜಿನ ಮನೀಷ್, ದ್ವತೀಯ ಬಹುಮಾನವನ್ನು ಎಂಕೆಎಂ ಕಾರ್ಕಳ ಸರ್ಕಾರ ಕಾಲೇಜಿನ ಪ್ರತೀಕ್ಷಾ, ತೃತೀಯ ಬಹುಮಾನವನ್ನು ಸುಳ್ಯ ಸರ್ಕಾರಿ ಕಾಲೇಜಿನ ತಿಲಕೇಶ್, ನಾಲ್ಕನೇ ಬಹುಮಾನಕ್ಕೆ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನ ಗೌತಮಿ ಅವರು ಸಮಾಧಾನಪಟ್ಟಿದ್ದಾರೆ.
ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಡೆರಿಕ್ ಚೆಸ್ ಸ್ಕೂಲ್ನ ಸಂಸ್ಥಾಪಕ ಪ್ರಸನ್ನ ರಾವ್ ಬಿ. ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ನಿರಂತರವಾಗಿ ಚೆಸ್ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಾಕಷ್ಟು ಪ್ರತಿಭೆಗಳು ಹೊರಬರಲು ಸಾಧ್ಯ. ಇಂತಹ ಚಟುವಟಿಕೆ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ ಎಂದ ಅವರು ಚೆಸ್ಗೆ ಅತ್ಯಂತ ಬೇಡಿಕೆ ಇದ್ದು, ತಮ್ಮ ಪದವಿ ಮುಗಿದ ನಂತರ ಅವಶ್ಯಕತೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಜಯಕರ ಭಂಡಾರಿ ಎಂ. ಮಾತನಾಡಿ, ಈ ವರ್ಷದಿಂದ ಕಾಲೇಜಿನಲ್ಲಿ ಪ್ರತೀ ವರ್ಷ ಈ ಪಂದ್ಯಾಟವನ್ನು ಮುಂದುವರಿಸಲಾಗುವುದು. ಮುಂದಿನ ವರ್ಷದ ಪಂದ್ಯಾಟಕ್ಕೆ ಈಗಿನಿಂದಲೇ ತಯಾರಿ ನಡೆಸಿ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರೇ, ಕ್ರೀಡಾ ಮನೋಭವದಿಂದ ಭಾಗವಹಿಸಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸ್ನಾತಕ ವಿಭಾಗದ ಮುಖ್ಯ ಸಂಯೋಜಕರಾದ ಪ್ರೊ. ವಸಂತಿ ಪಿ., ಐಕ್ಯೂಎಸಿ ಸಹ-ಸಂಯೋಜಕರಾದ ಡಾ.ಜೋತಿಪ್ರಿಯಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರಾದ ಶುಭ ಕೆ.ಹೆಚ್., ದೈಹಿಕ ಶಿಕ್ಷಣ ನಿದೇರ್ಶಕರಾದ ಡಾ. ಅಪರ್ಣ ಆಳ್ವ ಎನ್. ಉಪಸ್ಥಿತರಿದ್ದರು. ಕಾಆಲೇಜಿನ ವಿದ್ಯಾರ್ಥಿಗಳಾದ ವಿರೂಪಾಕ್ಷ ಸ್ವಾಗತಿಸಿ, ನಿರೂಪಿಸಿದರು. ವಿಜಯಲಕ್ಷ್ಮೀ ವಂದಿಸಿದರು.


