
Mangalore: ಜೂ.29, 30ರಂದು ಹಲಸು, ಮಾವು ಮೇಳ: ಎಸ್. ಪ್ರದೀಪ್ ಕುಮಾರ ಕಲ್ಕೂರ
ಮಂಗಳೂರು: ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು - ಹಲಸು ಮೇಳ ಜೂನ್ 29 ಹಾಗೂ 30ರಂದು ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಸಾದದ ಆವರಣದಲ್ಲಿ ಏರ್ಪಡಿಸಲಾಗಿದೆ. ಎಂದು ಆಯೋಜಕರಾದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಮಾತನಾಡಿದ ಅವರು, ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಮಾವು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾವಯವ ಕೃಷಿಕರಿಗೆ ಸನ್ಮಾನ:
ಬೆಂಗಳೂರು ಗ್ರಾಮಾಂತರ ಪ್ರದೇಶದ ತೂಗುಕೆರೆಯ ಕೃಷಿಕ ಹಲಸು ಹಾಗೂ ಹೂವಿನ ಬೆಳೆಗಾರ ಮುನಿರಾಜು ಹಾಗೂ ಅರಸಿಕೆರೆಯ ಮಾವು ಬೆಳೆಗಾರ ರಘು ಇವರನ್ನು ಸನ್ಮಾನಿಸಲಾಗುವುದು.
ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸಲಿದ್ದಾರೆ. ರುದ್ರಾಕ್ಷ, ಚಂದ್ರಬರ್ಕೆ ಮತ್ತಿತರ ವಿವಿಧ ತಳಿಯ ಹಲಸು, ಮಾವಿನ ಹಣ್ಣುಗಳಾದ ಮಲ್ಲಿಕಾ, ಮತ್ತೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಳಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್ಕ್ರೀಂ ಇತ್ಯಾದಿಗಳಲ್ಲದೆ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಒಟ್ಟು 40 ಸ್ಟಾಲ್ಗಳು ಲಭ್ಯವಿರಲಿವೆ ಎಂದರು.
ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ಪ್ರಮುಖರಾದ ಶಿವಪ್ರಸಾದ್ ಪ್ರಭು, ಜನಾರ್ದನ ಹಂದೆ, ಡಾ. ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.