ಅಯೋಧ್ಯೆ: ರಾಮ ತಾರಕ ಯಜ್ಞ ಸಪ್ತಾಹ ಸಂಪನ್ನ
Thursday, September 26, 2024
ಉಡುಪಿ: ಪಿತೃಪಕ್ಷ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂಕಲ್ಪಿಸಿದ್ದ ಶ್ರೀರಾಮ ತಾರಕ ಯಜ್ಞ ಸಪ್ತಾಹ ಗುರುವಾರ ನವಮಿ ತಿಥಿ ಪುನರ್ವಸು ನಕ್ಷತ್ರದ ದಿನದಂದು ಸಂಪನ್ನಗೊಂಡಿದೆ ಎಂದು ರಾಮಮಂದಿರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀಪಾದರು ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರದ ಯಾಗಶಾಲೆಯಲ್ಲಿ ಒಂದು ವಾರ ಕಾಲ ನಡೆದ ಶ್ರೀರಾಮ ತಾರಕ ಯಜ್ಞ ಪೂರ್ಣಾಹುತಿ ಬಳಿಕ ಅವರು ಸಂದೇಶ ನೀಡಿದರು.
ಪೂರ್ಣಾಹುತಿ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿ.ಹಿಂ.ಪ. ರಾಷ್ಟ್ರೀಯ ಮುಖಂಡ ಗೋಪಾಲ್, ಮಂದಿರದ ಅರ್ಚಕ ಪ್ರಮುಖರು, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಮೊದಲಾದವರಿದ್ದರು.
ವಿದ್ವಾನ್ ಶಶಾಂಕ್ ಭಟ್ ಯಾಗ ನೆರವೇರಿಸಿದರು. ಶ್ರೀಶ ಭಟ್, ರವಿರಾಜ್, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಮೊದಲಾದವರು ಸಹಕರಿಸಿದರು.
ಅವಭೃತ ಮಂಗಳ ಸ್ನಾನ..
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಯಜ್ಞ ಸಮಾಪನ ಬಳಿಕ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಪರಂಧಾಮಗೈದ ಗುಪ್ತಾರ್ ಘಾಟ್ ನಲ್ಲಿ ಅವಭೃತ ಮಂಗಳಸ್ನಾನ ನೆರವೇರಿಸಿದರು.