ಯಡಿಯೂರಪ್ಪ ಮಾನದಂಡ ಅನುಸರಿಸಿ ರಾಜೀನಾಮೆ ನೀಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಈ ಹಿಂದೆ ರಾಜ್ಯದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಜ್ ಅಂದಿನ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದಾಗ, ಸಿದ್ದರಾಮಯ್ಯ ಅವರು ಯಡಿಯೂರಪ್ಪನವರ ರಾಜಿನಾಮೆ ಕೇಳಿದ್ದರು. ಅದೇ ಮಾನದಂಡ ಅನುಸರಿಸಿ ಈಗ ಸಿದ್ದರಾಮಯ್ಯ ತನ್ನ ಹುದ್ದೆಗೆ ರಾಜಿನಾಮೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ತನ್ನ ಮಾತಿಗೆ ಬದ್ಧರಾಗಿ ರಾಜೀನಾಮೆ ಕೊಡುವ ವರೆಗೆ ಬಿಜೆಪಿ ತನ್ನ ಹೋರಾಟ ನಿಲ್ಲಿಸುವುದಿಲ್ಲ. ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಆರಂಭವಾಗಿದ್ದು, ರಾಜ್ಯದಾದ್ಯಂತ ಮುಂದುವರಿಯಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬ ನಂಬಿಕೆ ಇದ್ದುದರಿಂದ ರಾಜೀನಾಮೆ ಕೇಳಿರಲಿಕ್ಕಿಲ್ಲ ಎಂದು ಕೋಟ ಉತ್ತರಿಸಿದರು.
ರಾಜ್ಯದಲ್ಲಿ 12 ಲಕ್ಷ ಪಡಿತರ ಚೀಟಿಗಳನ್ನು ಸರಕಾರ ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ಅದರಿಂದ ರಾಜ್ಯದ 12 ಲಕ್ಷ ಕುಟುಂಬಗಳು ಗ್ಯಾರೆಂಟಿ ಯೋಜನೆಯಿಂದ ವಂಚಿತವಾಗುತ್ತವೆ. ಇದು ರಾಜ್ಯದ ಸರಕಾರದ ವೈಫಲ್ಯ ಮತ್ತು ಜನತೆಗೆ ಮಾಡುತ್ತಿರುವ ವಂಚನೆ ಎಂದವರು ಆರೋಪಿಸಿದರು.
ಹೈಕೋರ್ಟ್ ನೀಡಿದ ತೀರ್ಪನ್ನು ರಾಜಕೀಯ ಪ್ರೇರಿತ ಎಂದ ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಕೋಟ, ನ್ಯಾಯಾಲಯದ ತೀರ್ಪನ್ನು ಮಂತ್ರಿಗಳು ತಲೆಬಾಗಿ ಸ್ವೀಕರಿಸಬೇಕು. ಒಪ್ಪಿಗೆ ಇಲ್ಲದೇ ಇದ್ದಲ್ಲಿ ಮೇಲ್ಮನವಿ ಸಲ್ಲಿಸಲಿ. ಅದನ್ನು ಬಿಟ್ಟು ಇಂಥ ಹೇಳಿಕೆ ನೀಡುವ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಆಡಳಿತ ನಡೆಸುತ್ತೀರಿ ಎಂದು ಪ್ರಶ್ನಿಸಿದರು.
ತಿರುಪತಿ ಲಡ್ಡು ಪ್ರಸಾದ ಹಗರಣದಿಂದ ಹಿಂದೂ ಭಕ್ತರ ಭಾವನೆಗಳಿಗೆ ನೋವಾಗಿರುವ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕಠಿಣ ಶಬ್ದಗಳಿಂದ ಖಂಡಿಸಿದ್ದಾರೆ. ಆದರೆ, ಆಂಧ್ರದಲ್ಲಿ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಧಿಕಾರ ಹಂಚಿಕೊಂಡಿದ್ದ ಕಾಂಗ್ರೆಸ್ ಪಕ್ಷ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.