ಮಹಿಷಾಸುರ ದಲಿತರ ಅಸ್ಮಿತೆ: ಜಯನ್ ಮಲ್ಪೆ
ಉಡುಪಿ: ಮಹಿಷ ಮಂಡಲದ ಮಹಿಷಾಸುರ, ಕರುನಾಡಿನ ಸಾಂಸ್ಕೃತಿಕ ನಾಯಕ ಹಾಗೂ ದಲಿತರ ಮಹಾ ಅಸ್ಮಿತೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಷಾಸುರ ರಾಕ್ಷಸನಲ್ಲ, ಆತ ಮಹಾರಕ್ಷಕ ಎಂದವರು ಪ್ರತಿಪಾದಿಸಿದರು. ಅಂಬೇಡ್ಕರ್ ಯುವಸೇನೆ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ದಲಿತರು ಇತಿಹಾಸದ ಮರುವ್ಯಾಖ್ಯಾನಕ್ಕೆ ಮುಂದಾಗುವ ಅನಿವಾರ್ಯತೆ ಇದೆ ಎಂದರು.
ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಹಿಷಾಸುರನಿಗೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ವರ್ಷ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಮಹಿಷಾಸುರ ದಸರಾ ಏರ್ಪಡಿಸುವುದಾಗಿ ಹೇಳಿದರು.
ದಲಿತ ಮುಖಂಡರಾದ ಭಗವಾನ್, ಸತೀಶ್ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ಸಾಧು ಚಿಟ್ಪಾಡಿ, ಸುಶೀಲ್ ಕುಮಾರ್, ರವಿರಾಜ್ ಲಕ್ಷ್ಮೀನಗರ, ವಸಂತ ಅಂಬಲಪಾಡಿ, ಸುಧಾಕರ್ ನೆರ್ಗಿ, ಯೋಗೀಶ್ ಮಲ್ಪೆ, ಸುರೇಶ್ ತೊಟ್ಟಂ, ವಿನಯ ಬಲರಾಮನಗರ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಪೂರ್ಣಿಮಾ ಸದಾನಂದ, ಪ್ರಮೀಳ ಹರೀಶ್, ವಿನೋದ ಜಯರಾಜ್, ಚಿತ್ರಾಕ್ಷಿ ಕದಿಕೆ ಮೊದಲಾದವರು ಇದ್ದರು.
ದೀಪಕ್ ಕೊಡವೂರು ಸ್ವಾಗತಿಸಿ, ಗುಣವಂತ ತೊಟ್ಟಂ ವಂದಿಸಿದರು.