ಕೃಷ್ಣಮಠದಲ್ಲಿ ನವರಾತ್ರಿ ಆಚರಣೆ
ಉಡುಪಿ: ರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅ.2ರಿಂದ 13ರ ವರೆಗೆ ಶರನ್ನವರಾತ್ರಿ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಪರ್ವಕಾಲದಲ್ಲಿ ಶ್ರೀಕೃಷ್ಣನಿಗೆ ನವವಿಧ ಸ್ತ್ರೀ ಅಲಂಕಾರಗಳು ಸಮರ್ಪಿತವಾಗಲಿವೆ.
ಅ. 5ರಂದು ಸಂಜೆ ರಾಜಾಂಗಣದಲ್ಲಿ ಸಂಜೆ 5ರಿಂದ ಸಾಮೂಹಿಕ ಅಷ್ಟಾದಶ ದುರ್ಗಾ ದೀಪ ನಮಸ್ಕಾರ, 11ರಂದು ಚಂಡಿಕಾಯಾಗ ಪೂರ್ಣಾಹುತಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಪ್ರತಿನಿತ್ಯ ರಾಜಾಂಗಣ ಹಾಗೂ ಮಧ್ವ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 2ರಿಂದ 13ರ ವರೆಗೆ ವಿದ್ವಾನ್ ಸತ್ಯಮೂರ್ತಿ ಆಚಾರ್ಯ ಹುಬ್ಬಳ್ಳಿ ಅವರಿಂದ`ಶ್ರೀನಿವಾಸ ಕಲ್ಯಾಣ ನೀಡಿದ ಗೀತಾ ಚಿಂತನೆ' ವಿಷಯ ಕುರಿತ ಸಂಜೆ ೬ರಿಂದ ಉಪನ್ಯಾಸ ನಡೆಯಲಿದೆ.
ಅ. 13ರಂದು ವಿಜಯದಶಮಿ ಪರ್ವಕಾಲದಲ್ಲಿ ಮಧ್ವಜಯಂತಿ ಆಚರಣೆ ಪ್ರಯುಕ್ತ ಅನಂತೇಶ್ವರ ದೇವಳದ ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಪಾರಾಯಣಗಳು ನಡೆಯಲಿವೆ. ಅಂದು ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಕದಿರು ಕಟ್ಟುವ ಕರ್ಯಕ್ರಮ, ಸಂಜೆ ಮಧ್ವಾಚಾರ್ಯರ ಗ್ರಂಥಗಳು ಮತ್ತು ಭಾವಚಿತ್ರದ ಮೆರವಣಿಗೆ ಹಾಗೂ ಶಮೀಪೂಜೆ ಪ್ರಯುಕ್ತ ಕೃಷ್ಣಮಠದಿಂದ ಕಡಿಯಾಳಿ ಮಹಿಷಮರ್ದಿನಿ ಸನ್ನಿಧಾನಕ್ಕೆ ವಿಜಯೋತ್ಸವ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.