
ವ್ಯಕ್ತಿಯ ಸಂಶಯಾಸ್ಪದ ಸಾವು, ನೀರಿನ ಟಾಂಕಿ ಬಳಿ ಶವ ಪತ್ತೆ: ಪೊಲೀಸರಿಂದ ತೀವ್ರ ತನಿಖೆ
ಕಟೀಲು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಕೊಂಡೆಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕಿ ಬಳಿ ವ್ಯಕ್ತಿಯೊಬ್ಬರ ಶವ ಕೊಲೆಯಾದ ಸ್ಥಿತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ತಾರಾನಾಥ (40) ಎಂದು ಗುರುತಿಸಲಾಗಿದೆ.
ಮೃತ ತಾರಾನಾಥ ಕಟೀಲು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಭಾನುವಾರ ಬೆಳಗಿನ ಜಾವ ಕೊಂಡೆಮೂಲ ನೀರಿನ ಟ್ಯಾಂಕಿ ಬಳಿ ಮೃತನ ಕುತ್ತಿಗೆಯಲ್ಲಿ ಬಟ್ಟೆ ಒಣಗಿಸುವ ಕೇಬಲ್ ವಯರ್ ಪತ್ತೆಯಾಗಿದ್ದು, ಕೊಲೈಗೈದ ಸ್ಥಿತಿಯಲ್ಲಿ ಸಂಶಯಾತ್ಮಕ ರೀತಿಯಲ್ಲಿ ಶವ ಪತ್ತೆಯಾಗಿದೆ.
ಕೂಡಲೇ ಸ್ಥಳೀಯರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜಪೆ ಇನ್ಸ್ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರೀಲನೆ ನಡೆಸಿವೆ. ಮೃತದೇಹದ ಮರಣೋತ್ತರ ಶವಪರೀಕ್ಷೆ ಹಾಗೂ ತನಿಖಾ ತಂಡಗಳ ವರದಿಯ ಬಳಿಕ ಸ್ಪಷ್ಟ ಚಿತ್ರಣ ಹೊರಬರಲಿದೆ.
ವಿವಾಹಿತರಾಗಿದ್ದ ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಹಿಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಹೆಚ್ಚಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅದೇ ಮನೆಯಲ್ಲಿ ಆತನ ತಂದೆ ಹಾಗೂ ಸಹೋದರ ಇದ್ದಾರೆ.