
ಅ.26ರಂದು ವಾಲಿಬಾಲ್ ಪಂದ್ಯಾಟ: ‘ರಾಜ್ಯೋತ್ಸವ ಕಪ್-2024’
ಮಂಗಳೂರು: ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮಗಳ ಬಾಲಕ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟ ‘ರಾಜ್ಯೋತ್ಸವ ಕಪ್-2024’ ಅ.26ರಂದು ಬೆಳಗ್ಗೆ 9.30ರಿಂದ ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರುಣ್ ಬ್ಯಾಪ್ಟಿಸ್ಟ್, ರಾಷ್ಟ್ರಮಟ್ಟದ ವಾಲಿಬಾಲ್ ಅಟಗಾರ ಸುನಿಲ್ ಬಾಳಿಗಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದ್ದು, ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಎವರೆಸ್ಟ್ ಪಿಂಟೋ ಭಾಗವಹಿಸಲಿದ್ದಾರೆ ಎಂದರು.
ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ಫೌಂಡೇಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಬ್ಯಾಪ್ಟಿಸ್ಟ್ ಬ್ಯಾಡ್ಮಿಂಟನ್ ಅಕಾಡೆಮಿ ಉರ್ವಸ್ಟೋರ್ ಇವರ ಜಂಟಿ ಅಶ್ರಯದಲ್ಲಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಗುವುದು. 1ನೇ ತರಗತಿಯಿಂದ 7ನೇ ತರಗತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಇಲಾಖೆ ನಿಗದಿಪಡಿಸಿದ ಎಂಟ್ರಿಶೀಟ್ ಮಾದರಿಯಲ್ಲಿ ವಿವರ ಭರ್ತಿ ಮಾಡಬೇಕಾಗಿದ್ದು, ಎಂಟ್ರಿ ನೀಡಲು ಅ.24 ಕೊನೆಯ ದಿನವಾಗಿದೆ ಎಂದವರು ತಿಳಿಸಿದರು.
ಗೌರವಾಧ್ಯಕ್ಷ ಸತೀಶ್ ಎಸ್., ಟ್ರಸ್ಟಿ ಗಣೇಶ್ ಕುಡ್ವ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಫ್ರಾನ್ಸಿಸ್ ಸಲ್ಡಾನ್ಹಾ, ಸುನಿಲ್ ಅಂಚನ್, ಉದಯ್ ಅಚಾರ್ ಉಪಸ್ಥಿತರಿದ್ದರು.