
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅವರಿಗೆ ಸನ್ಮಾನ ಸಮಾರಂಭ
ಮಂಗಳೂರು: ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿರುವ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅವರು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಕರ್ನಾಟಕ, ರುಪ್ಸಾ ಕರ್ನಾಟಕ ವತಿಯಿಂದ ಶಿಕ್ಷಣ ಭೀಷ್ಮ ಪ್ರಶಸ್ತಿ ಪಡೆದುಕೊಂಡಿರುವುದಕ್ಕಾಗಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಶಿಕ್ಷಣ ತಜ್ಞರು ಮತ್ತು ಯುನೈಟೆಡ್ ನ್ಯಾಷನಲ್ ಡೆವಲಪ್ಮೆಂಟ್ ಪ್ರೋಜೆಕ್ಟ್ ಮತ್ತು ಸಂಪನ್ಮೂಲ ವ್ಯಕ್ತಿಗಳು ಆಗಿರುವ ಡಾ. ಎನ್. ಸಂತೋಷ್ ಕುಮಾರ್ ಅವರು ಭಾಗವಹಿಸಿ ಶಕ್ತಿ ವಿದ್ಯಾ ಸಂಸ್ಥೆಯೊಂದು ಮಾದರಿ ವಿದ್ಯಾ ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಕಲ ಸೌಲಭ್ಯವು ಇದೆ. ಭಾರತೀಯ ಸಂಸ್ಕಾರದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದೆ. ಇಂತಹ ಸಂಸ್ಥೆಯನ್ನು ಕಟ್ಟಿದ ಡಾ. ಕೆ.ಸಿ. ನಾಕ್ರವರು ನಮಗೆಲ್ಲ ಸ್ಫೂರ್ತಿ ನೀಡುವ ಒಬ್ಬ ಜೀವಂತ ದಂತಕತೆಯಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ನಿಟ್ಟಿನಲ್ಲಿ ಸಮಾಜ ಸೇವೆಯನ್ನು ಮಾಡುತ್ತಲೆ ಬಂದಿರುವ ಶ್ರೀಯುತರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ. ಕೆ.ಸಿ. ನಾಕ್ ಮಾತನಾಡಿ, ಈ ಪ್ರಶಸ್ತಿ ಬರಲು ನಾನೊಬ್ಬ ಕಾರಣನಲ್ಲ ಇದು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಂದಲೂ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಶಾಲೆಯಲ್ಲಿ ಸಿಗುವ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣದಿಂದ ಮಕ್ಕಳು ಬೆಳವಣಿಗೆ ಹೊಂದಿ ದೇಶಕ್ಕೆ ಸಂಪತ್ತಾಗಬೇಕು. ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕೊರತೆ ಬಾರದಂತೆ ಸಕಲ ಸೌಲಭ್ಯವನ್ನು ಒದಗಿಸುವತ್ತ ಸದಾ ನಾನು ಯೋಚಿಸುತ್ತಿರುತ್ತೇನೆ ಮತ್ತು ನನ್ನ ಸಾಧನೆಯಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಡಾ. ಕೆ.ಸಿ. ನಾಕ್ರವರು ನಡೆದು ಬಂದ ಹಾದಿ ಮತ್ತು ಶಕ್ತಿ ವಿದ್ಯಾ ಸಂಸ್ಥೆಯ ಆರಂಭದಿಂದ ಇಲ್ಲಿಯವರೆಗಿನ ಪ್ರಗತಿಯನ್ನು ಕುರಿತು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ ತಿಳಿಸಿದರು.
ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಡಾ. ಕೆ.ಸಿ. ನಾಕ್ ಅವರು ಜೀವನದುದ್ದಕ್ಕೂ ಮಾಡಿದ ಕಾರ್ಯ ಸಾಧನೆ ಮತ್ತು ಅವರು ಬೆಳೆದು ಬಂದ ಹಾದಿಯ ಕುರಿತು ಒಂದು ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.