ಜನಪ್ರತಿನಿಧಿಗಳಿಗೆ ಬಹಿಷ್ಕಾರ
ಸುರತ್ಕಲ್: ಸುರತ್ಕಲ್ ಕುಳಾಯಿ ಧಕ್ಕೆ ಕಾಮಗಾರಿಯಲ್ಲಿ ಮೀನುಗಾರಿಕೆಗೆ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು ಸರಕಾರ ಸ್ಥಳೀಯ ನಾಡ ದೋಣಿ ಮೀನುಗಾರರ ಅಹವಾಲಿಗೆ ಸ್ಪಂದಿಸದೆ ಮತ್ತೆ ಕಾಮಗಾರಿಯನ್ನು ಆರಂಭಿಸಿದೆ.
ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಚುನಾವಣೆಗಳನ್ನು ನಿರಂತರವಾಗಿ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ಬಹಿಷ್ಕಾರ ಹಾಕಲಿದ್ದೇವೆ ಎಂದು ಗಂಭೀರ ಎಚ್ಚರಿಕೆಯನ್ನು ಮೀನುಗಾರರ ಸಂಘಟನೆಗಳು ನೀಡಿವೆ.
ಕುಳಾಯಿ ಇದಕ್ಕೆ ಮುಂಭಾಗ ಸೋಮವಾರ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಹಾಗೂ ಕರಾವಳಿ ಮೂಲ ನಾಡದೋಣಿ ಮೀನುಗಾರಿಕಾ ಸಂಘಟನೆಗಳು ಈ ಎಚ್ಚರಿಕೆಯನ್ನು ನೀಡಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಭಯವೇ ಇಲ್ಲವೆಂಬಂತೆ ಅವರ ಮಾತಿಗೂ ನಿರ್ಲಕ್ಷ್ಯ ವಹಿಸಿದ್ದಾರೆ.
ಕಾಮಗಾರಿ ಸ್ಥಗಿತಕ್ಕೆ ರಾಜ್ಯದ ಸಚಿವ ಮಂಕಾಳ್ ವೈದ್ಯ ಆದೇಶ ನೀಡಿದ್ದರು. ದಕ್ಕೆಯ ಕಾಮಗಾರಿಯನ್ನು ಮಂಗಳೂರು ಬಂದರು ಪ್ರಾಧಿಕಾರ ನಡೆಸುತ್ತಿದೆ. ಜನಪ್ರತಿನಿಧಿಗಳು ನಾಡ ದೋಣಿ ಮೀನುಗಾರಿಕೆಗೆ ಸೂಕ್ತವಾದ ಬಂದರು ನಿರ್ಮಾಣ ಮಾಡುವವರೆಗೆ ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೆ ಮಂಗಳವಾರದಿಂದ ಪ್ರತಿಭಟನೆಯನ್ನು ನಿರಂತರವಾಗಿ ನಡೆಸಲಿದ್ದೇವೆ ಕಾಮಗಾರಿ ನಡೆಸಲು ಬಿಡುವುದಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ ಬೇಡಿಕೆ ಈಡೇರಿಸುವವರೆಗೆ ಚುನಾವಣಾ ಬಹಿಷ್ಕಾರ ಮಾಡಿದ್ದೇವೆ ಎಂದು ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.