
ದೇಶದ ಭವಿಷ್ಯ ಕರಾಳವಾಗಿಸುವ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಕಳವಳ
Sunday, October 27, 2024
ಉಡುಪಿ: ದೇಶದ ಸಂಪತ್ತನ್ನು ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದು ಒಂದೊಂದು ಹಗರಣದ ಸಂಪತ್ತಿನ ಮೌಲ್ಯವೇ ದೇಶದ ಒಟ್ಟು ಬಜೆಟ್ ಗಾತ್ರಕ್ಕಿಂತ ಹೆಚ್ಚಿದೆ. ಇಂದು ಬಹಳ ಸುಲಭವಾಗಿ ಹಣ ಮಾಡಬಹುದು ಎಂಬ ಕಾರಣಕ್ಕೆ ಯುವ ಸಮುದಾಯವೂ ರಾಜಕಾರಣಿಗಳಾಗಬೇಕು ಎಂದು ಅಪೇಕ್ಷೆಪಡುವ ದಯನೀಯ ಸ್ಥಿತಿ ಎದುರಾಗಿದೆ. ಇಂಥ ಗಂಭೀರ ಪರಿಸ್ಥಿತಿಗಳು ದೇಶದ ಭವಿಷ್ಯವನ್ನು ಮಂಕಾಗಿಸುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಭೀರ ಸಮಾಲೋಚನೆ ನಡೆಸಿದರು.
ಕೆಲವು ರಾಜ್ಯಗಳ ಒಂದೊಂದು ಹಗರಣದ ಮೊತ್ತ ಕೋಟ್ಯಂತರ ರೂ.ಗಳಾಗಿದೆ. ಯಾವ ಸಂವಿಧಾನ ಯಾವ ಕಾನೂನುಗಳಿಂದಲೂ ಅದರ ನಿಯಂತ್ರಣ ಅಸಾಧ್ಯ ಎಂಬಂತೆ ಅಗಿದೆ. ರಾಜಕಾರಣಿಗಳು ಕಾಯಿದೆ, ಕಾನೂನು, ಸಂವಿಧಾನಗಳೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡುವಾಗ ಬಹಳ ಬೇಸರವಾಗುತ್ತದೆ. ಆದ್ದರಿಂದ ಹೊಸ ಪೀಳಿಗೆಗೆ ದುರಾಸೆಯಿಂದ ದೂರವಿರಲು, ದೇಶಾಭಿಮಾನ ಹಾಗೂ ಮಾನವೀಯತೆಯ ಪಾಠ ಹೇಳಬೇಕಾಗಿದೆ ಎಂದರು.
ಯತಿತ್ರಯರೂ ಹೆಗ್ಡೆಯವರ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿದರು. ಫಲ ಮಂತ್ರಾಕ್ಷತೆ ನೀಡಿ ಹರಸಿದರು.