ಮಂಗಳೂರಿಗೆ ಬರಲಿದೆ ವಾಟರ್ ಮೆಟ್ರೋ

ಮಂಗಳೂರಿಗೆ ಬರಲಿದೆ ವಾಟರ್ ಮೆಟ್ರೋ


ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳು, ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಬಹು ಸಂಪರ್ಕ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಇದೀಗ ಕೇರಳದ ಕೊಚ್ಚಿ ಮಾದರಿಯಲ್ಲಿ ವಾಟರ್ ಮೆಟ್ರೋ ಯೋಜನೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮಾರಿಟೈಮ್ ಬೋರ್ಡ್ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು ರೂಪಿಸಲು ನಿರ್ಧರಿಸಿದೆ. ಈ ಯೋಜನೆ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್‌ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ.

ಈ ಯೋಜನೆ ಜಾರಿಗೆ ಬಂದರೆ ಕೊಚ್ಚಿಯ ನಂತರ ಭಾರತದ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಲಿದೆ. ಈ ಯೋಜನೆಯು ಪರಿಸರ ಸ್ನೇಹಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್ ದೂರದವರೆಗೆ ಬೋಟ್ ಸಂಚರಿಸಲಿದೆ. ಬಳಿಕ ಬಜಾಲ್‌ನಿಂದ ಪ್ರಾರಂಭವಾಗಿ ಗುರುಪುರದ ಮರವೂರು ಸೇತುವೆಯವರೆಗೆ ವಿಸ್ತರಿಸಲಿದೆ. ಇದು ಸುಮಾರು 17 ಆಧುನಿಕ ಮೆಟ್ರೋ ನಿಲ್ದಾಣಗಳನ್ನು ಹೊಂದಿರಲಿದೆ. ಯೋಜನೆಯು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲಿದೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸೋಮೇಶ್ವರ ದೇವಸ್ಥಾನ, ಉಳ್ಳಾಲ ಮತ್ತು ನವಮಂಗಳೂರು ಬಂದರು ಮುಂತಾದ ಪ್ರಮುಖ ಸ್ಥಳಗಳನ್ನು ಉದ್ದೇಶಿತ ಮಾರ್ಗದಲ್ಲಿ ಸೇರಿಸಲಾಗಿದೆ. ಈ ಯೋಜನೆಯಡಿ ಅತ್ಯಾಧುನಿಕ ಎಲೆಕ್ಟ್ರಿಕ್ ಮತ್ತು ಡೀಸೆಲ್ ಬೋಟ್ ಗಳನ್ನು ಬಳಕೆ ಮಾಡಲಾಗುತ್ತದೆ. ಬೋಟ್‌ಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article