ಕನ್ನಡ ಭಾಷೆಯನ್ನು ಎಲ್ಲರೂ ಒಟ್ಟಾಗಿ ಉಳಿಸಿ ಬೆಳೆಸುವಂತಾಗಬೇಕು: ಯಶ್‌ಪಾಲ್ ಸುವರ್ಣ

ಕನ್ನಡ ಭಾಷೆಯನ್ನು ಎಲ್ಲರೂ ಒಟ್ಟಾಗಿ ಉಳಿಸಿ ಬೆಳೆಸುವಂತಾಗಬೇಕು: ಯಶ್‌ಪಾಲ್ ಸುವರ್ಣ


ಉಡುಪಿ: ಇಂದು ವಿದ್ಯಾರ್ಥಿನಿಯರಿಗೆ ಶಿಕ್ಷಣ, ಸಾಂಸ್ಕೃತಿಕ, ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವಕಾಶಗಳು ಇದ್ದು, ಅದನ್ನು ಬಳಸಿಕೊಂಡು ಉತ್ತಮ ಜೀವನವನ್ನು ನಡೆಸಲು ವಿದ್ಯಾರ್ಥಿಗಳಲ್ಲಿ ಆಸಕ್ತಿ, ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಇಟ್ಟುಕೊಂಡು ಮಾಡುವ ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡಿದರೆ ಉತ್ತಮ ಫಲಿತಾಂಶ ಖಂಡಿತ ತಮ್ಮ ನಿರೀಕ್ಷೆಯಂತೆ ಇರುತ್ತದೆ ಎಂದು ಉಡುಪಿಯ ಮಾನ್ಯ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದರು.

ಇವರು ನಗರದ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಪುರಭವನ ಅಜ್ಜರಕಾಡು ಇಲ್ಲಿ ಆಯೋಜಿಸಲಾದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಿದ್ಯಾರ್ಥಿ ವೇದಿಕೆ, ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಮತ್ತು ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇವರು ಮಾತನಾಡಿ, ಸಂಸ್ಕೃತಿ, ನಡೆ, ನುಡಿ ಮತ್ತು ಆಚರಣೆಗಳಲ್ಲಿ ವಿವಿಧತೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇಂದು ಕನ್ನಡ ಭಾಷೆಯನ್ನು ಎಲ್ಲರೂ ಒಟ್ಟಾಗಿ ಉಳಿಸಿ ಬೆಳೆಸುವಂತಾಗಬೇಕು ಎಂದರು. 

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ ಪ್ರೊ. ಬಿ. ಶಿವರಾಮ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಲೇಜು ಜೀವನದಲ್ಲಿ ಸಿಗುವ ಅವಕಾಶಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ಉತ್ತಮಪಡಿಸಲು ಸಹಾಯವಾಗುತ್ತದೆ. ಪದವಿ ಅಂಕಗಳು ಕೇವಲ ಉದ್ಯೋಗವನ್ನು ಹೊಂದಲು ಸಹಕಾರಿಯಾದರೆ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಿಗೆ ಸಮಯಪಾಲನೆ, ನಾಯಕತ್ವ, ಸಹನೆ, ಸಹಬಾಳ್ವೆ ಮತ್ತು ಸಾಮಾಜಿಕ ಹೊಂದಾಣಿಕೆಯoತಹ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ ಎಂದರು.

ನಾಡೋಜ ಡಾ. ಜಿ. ಶಂಕರ್ ಕಾಲೇಜಿನ ಮಹಾಪೋಷಕರು, ಪ್ರವರ್ತಕರು ಡಾ. ಜಿ ಶಂಕರ್ ಪ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸುಪುತ್ರಿ ಶ್ಯಾಮಿಲಿ ನವೀನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು. 

ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಟಿ ಪ್ರತಿಮಾ ನಾಯಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರು ಇಂದು ಮಗಳಾಗಿ, ಸಹೋದರಿಯಾಗಿ, ಗೃಹಣಿಯಾಗಿ, ಅತ್ತೆ ಮತ್ತು ಸೊಸೆಯಾಗಿ ಮಾತ್ರ ಗುರುತಿಸಿಕೊಳ್ಳುವ ಪ್ರಯತ್ನಮಾಡದೆ ತಾನು ಯಾರು ಎಂಬುದನ್ನು ತಿಳಿದುಕೊಂಡು, ತನ್ನ ಮನೆ, ಕುಟುಂಬದ ಜೊತೆಗೆ ತನ್ನ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಪರಿಶ್ರಮ ಪಟ್ಟು ಜೀವನದಲ್ಲಿ ಸಫಲತೆಯನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದರು.

 ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ನಿಕೇತನ ಇವರು ಪ್ರಸಕ್ತ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರಪ್ರಸಾದ್ ಕೆ.ವಹಿಸಿದ್ದರು. ವಾಣಿಜ್ಯ ನಿಕಾಯದ ಡೀನ್ ಗೌರಿ ಭಟ್, ಸ್ನಾತಕೋತ್ತರ ವಿಭಾಗದ ಸಂಯೋಜಕ ರವಿಪ್ರಕಾಶ್ ಮತ್ತು ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಹಾಗೂ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀಮತಿ ಅಡಿಗ ಪ್ರಾಸ್ತವಿಕವಾಗಿ ಮತನಾಡಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖ ಎಸ್.ಎನ್. ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಪ್ರೊ. ಬಿ. ಶಿವರಾಮ ಶೆಟ್ಟಿ ಮತ್ತು ಪ್ರತಿಮಾ ನಾಯಕ್ ಇವರನ್ನು ಸಮ್ಮಾನಿಸಲಾಯಿತು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕೇಶವಮೂರ್ತಿ ವಂದಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article