
ನ.10 ರಂದು ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ‘Niveus Mangaluru Marathon 2024’ ಓಟ: ಸಂಚಾರ ಬದಲಾವಣೆ
ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನ.10ರಂದು ಬೆಳಗ್ಗೆ 4ರಿಂದ 10 ಗಂಟೆ ವರೆಗೆ ಆಯೋಜಿಸಲಾದ ‘Niveus Mangaluru Marathon 2024’ ಓಟ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾರಥಾನ್ ಆರಂಭವಾಗುವಲ್ಲಿಂದ ಮುಕ್ತಾಯದ ವರೆಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಈ ಮ್ಯಾರಥಾನ್ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್), ಚಿಲಿಂಬಿ, ಉರ್ವ ಸ್ಟೋರ್ ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆ.ಐ.ಒ.ಸಿ.ಎಲ್ ಜಂಕ್ಷನ್ ಮುಖಾಂತರ ಎನ್.ಎಂ.ಪಿ.ಎ ಸರ್ವಿಸ್ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್ನಲ್ಲಿ ಪಣಂಬೂರು ಬೀಚ್ ರಸ್ತೆಗೆ ತಿರುಗಿ ವಾಪಾಸ್ ಡಿಕ್ಸಿ ಕ್ರಾಸ್, ಕೆ.ಐ.ಓ.ಸಿ.ಎಲ್ ಜಂಕ್ಷನ್ಗೆ ಬಂದು ತಣ್ಣೀರು ಬಾವಿ ಬೀಚ್ ವರೆಗೆ ಹೋಗಿ ವಾಪಾಸ್ ಕೊಟ್ಟಾರ ಚೌಕಿ, ಲೇಡಿಹಿಲ್ ಮುಖಾಂತರ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಲಾಗಿರುವ ವಾಹನ ಸಂಚಾರ-ನಿಲುಗಡೆ ನಿಷೇಧ, ಮಾರ್ಪಾಡು
ವಿವರ ಈ ಕೆಳಗಿನಂತಿದೆ.
ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧ ಮಾಡಿದ ಮಾರ್ಗಗಳ ವಿವರ:
1. ಮಣ್ಣಗುಡ್ಡೆ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಎಲ್ಲ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
2. ಉರ್ವ ಮಾರ್ಕೆಟ್ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಎಲ್ಲ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
3. ಕೆ.ಎಸ್.ಆರ್.ಟಿ.ಸಿ ಯಿಂದ ಲಾಲ್ ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.
4. ನಾರಾಯಣ ಗುರು ವೃತ್ತ (ಲೇಡಿಹಿಲ್)ದಿಂದ ಕೊಟ್ಟಾರ ಚೌಕಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
5. ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕ್ರಾಸ್ ಕಡೆಗೆ ಸಾಗುವ ಸರ್ವಿಸ್ ರಸ್ತೆಯಲ್ಲಿ ಎಲ್ಲ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
6. ಕೋಡಿಕಲ್ ಕ್ರಾಸ್ ನಿಂದ ಕೂಳೂರು ಹೊಸ ಸೇತುವೆ ವರೆಗೆ ಎಲ್ಲ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
7. ತಣ್ಣೀರುಬಾವಿ ಬಾವಿ ಬೀಚ್ ರಸ್ತೆಯಲ್ಲಿ ತಣ್ಣೀರು ಬಾವಿ ಬೀಚ್ ವರೆಗೆ ಎಲ್ಲ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
8. Marathon ಓಟ ಸಾಗುವ ಮಾರ್ಗದಲ್ಲಿನ ಎಡ ಭಾಗದಲ್ಲಿರುವ ಎಲ್ಲಾ ಅಡ್ಡ ರಸ್ತೆಗಳಿಂದ ವಾಹನಗಳು ಮ್ಯಾರಥಾನ್ ಓಟ ಸಾಗುವ ಮುಖ್ಯ ರಸ್ತೆಗೆ ಬರುವುದನ್ನು ನಿಷೇಧಿಸಿದೆ.
ವಾಹನ ಸಂಚಾರಕ್ಕೆ ಮಾಡಿರುವ ಬದಲಿ ಮಾರ್ಗಗಳ ವಿವರ:
1. ಪಿ.ವಿ.ಎಸ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಸಂಚರಿಸುವ ವಾಹನಗಳು ಲಾಲ್ಬಾಗ್- ಕೆ.ಎಸ್.ಆರ್.ಟಿ.ಸಿ ಮೂಲಕ ಸಂಚರಿಸುವುದು.
2. ಕುದ್ರೋಳಿ ಮಣ್ಣಗುಡ್ಡೆ ಮತ್ತು ಉರ್ವ ಮಾರ್ಕೆಟ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡೆ - ಬಲ್ಲಾಳ್ ಬಾಗ್, ನೆಹರೂ ಅವಿನ್ಯೂ ರಸ್ತೆ-ಲಾಲ್ಬಾಗ್- ಕೆ.ಎಸ್.ಆರ್.ಟಿ.ಸಿ ಮೂಲಕ ಸಂಚರಿಸುವುದು.
3. ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಕಾಪಿಕಾಡ್ ಕಡೆಯಿಂದ ಕುಂಟಿಕಾನ ಮುಖೇನ ಸಂಚರಿಸುವುದು.
4. ಕೆ.ಪಿ.ಟಿ- ಕುಂಟಿಕಾನ ಕಡೆಯಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಕೋಡಿಕಲ್ ಕ್ರಾಸ್ ಫ್ಲೈ - ಓವರ್ ಬಳಿ ಬಲಕ್ಕೆ ತಿರುಗಿ ಕೂಳೂರು ಕೊಟ್ಟಾರ ಕ್ರಾಸ್ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಕೂಳೂರು ಹಳೇ ಸೇತುವೆ ಬಳಿಯ ಪ್ಲೈ- ಓವರ್ ನ ಮುಕ್ತಾಯದಲ್ಲಿ ಎಡಕ್ಕೆ ತಿರುಗಿ ಕೂಳೂರು ಹೊಸ ಸೇತುವೆ ಮುಖೇನ ಕೆ.ಐ.ಓ.ಸಿ.ಎಲ್. ಮುಖಾಂತರ ಸಂಚರಿಸುವುದು.
5. ಕಾವೂರು-ಪಂಜಿಮೊಗರು ಕಡೆಯಿಂದ ಬರುವ ಎಲ್ಲ ವಾಹನಗಳು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸರ್ವೀಸ್ ರಸ್ತೆಯ ಮುಖಾಂತರ ಉಡುಪಿ ಕಡೆಗೆ ಸಂಚರಿಸುವುದು.
6. ಅಶೋಕ ನಗರ, ಶೇಡಿಗುರಿ, ದಂಬೇಲ್, ಸುಲ್ತಾನ್ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್, ಮಣ್ಣಗುಡ್ಡೆ ಮುಖಾಂತರ ಸಂಚರಿಸುವುದು.
ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾ ಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸುವ ಈ ಮ್ಯಾರಥಾನ್ ಓಟಕ್ಕೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.