
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ
ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆ ಇದರ ಸಹಯೋಗದಲ್ಲಿ, ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರ ವತಿಯಿಂದ ಇಂದು 2024-25ನೇ ಸಾಲಿನ ಪ್ರೌಢ ಶಾಲಾ ವಿಭಾಗದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭವು ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಉದ್ಘಾಟಿಸಿ ಮಾತನಾಡಿ, ಜಗತ್ತು ಎಲ್ಲಾ ರಂಗದಲ್ಲಿಯು ಆನ್ಲೈನ್ ಯುಗದಲ್ಲಿದೆ. ನಾವು ಅನ್ವೇಷಣೆ ಮಾಡುತ್ತಿದ್ದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎಲ್ಲವೂ ಕಂಪ್ಯೂಟರ್ನ ಚಿಪ್ನ ಮೂಲಕ ನಿಯಂತ್ರಿಸಲ್ಪಟ್ಟಿರುವ ಕಾಲಘಟ್ಟವಾಗಿದೆ. ನಾವು ಎಲ್ಲಾ ಅನ್ವೇಷಣೆಯನ್ನು ಮಾಡುವ ಸಂದರ್ಭದಲ್ಲಿ ಕಂಪ್ಯೂಟರಿನ ಭಾಷೆಯನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಬೇಕಾಗಿದೆ. ಇವತ್ತು ಮಗುವಿಗೆ ಮೊಬೈಲ್ ಕೊಟ್ಟಾಗ ಅದನ್ನು ಅರ್ಥಮಾಡಿಕೊಂಡು ಉಪಯೋಗಿಸುವ ಕಲೆಯನ್ನು ಮಗು ಹೊಂದಿದೆ ಎಂದು ಹೇಳಿದರು.
‘ವಿಶ್ವದಲ್ಲಿ ನಾವು ಮೊದಲಿಗರಾಗಬೇಕಾದರೆ ವಿಜ್ಞಾನದಲ್ಲಿ ಪ್ರತಿದಿನವೂ ಅನ್ವೇಷಣೆಯನ್ನು ಮಾಡಬೇಕು. ಇದಕ್ಕೋಸ್ಕರ ಸರ್ಕಾರ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತಿದೆ. ಶಾಲೆಯ ಒಳಗಡೆ ಪಠ್ಯ ಕ್ರಮದ ಮೂಲಕ ಅಂಕ ಪಡೆಯುವುದರ ಜೊತೆಗೆ ಇಂತಹ ವಿಜ್ಞಾನದ ಪ್ರಯೋಗವನ್ನು ಸಹ ಕಲಿಯಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿ ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ) ವೆಂಕಟೇಶ್ ಎಸ್. ಪಟೇಗಾರ್ ಮಾತನಾಡಿ, ವಿಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಸುತ್ತಮುತ್ತಲಿನ ಪರಿಸರ ಮಾಲಿನ್ಯ ಇನ್ನೂ ಕಡಿಮೆಯಾಗಿಲ್ಲ, ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಯೋಚನೆ ಮಾಡಲೇಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂನ ಶಿಕ್ಷಣ ಸಹಾಯಕ ಹೇಮರಾಜ್ ಮಾತನಾಡಿ, ಬಂದಿರುವ ಎಲ್ಲಾ ಸ್ಪರ್ಧಾಳುಗಳಿಗೆ ವಿಜ್ಞಾನದ ಮಾದರಿಯ ತಯಾರಿಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್ ಮಾತನಾಡಿ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ವಿಜ್ಞಾನ ಮಾದರಿ ತಯಾರಿಸಲು ಶ್ರಮಿಸಿರುವ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. ನಮ್ಮ ದೇಶ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಗುರುತಿಸಿಕೊಳ್ಲಲು ನಿಮ್ಮಂತಹ ವಿದ್ಯಾರ್ಥಿಗಳ ಸಂಶೋಧನೆ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆ.ವಿ. ರಾವ್ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಹೆಚ್.ಆರ್., ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ್ ಅಡಿಗ, ಶಕ್ತಿ ವಿದ್ಯಾ ಸಂಸ್ಥೆಯ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಹಾಗೂ ಉಪನಿರ್ದೇಶಕಿ(ಅಬಿವೃದ್ಧಿ) ರಾಜಲಕ್ಷ್ಮಿ ಕೆ. ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿ, ಶಾಲೆಯ ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರತಿ ಜಿಲ್ಲೆಯಿಂದ 6 ಮಂದಿಯ ಹಾಗೆ ಒಟ್ಟು 210 ಸ್ಪರ್ಧಿಗಳು ಭಾಗವಹಿಸಿದರು.