
ರಾಜ್ಯ ಸರ್ಕಾರದ ಗ್ಯಾರಂಟಿಗೆ ಅವಹೇಳನ: ಪಾಪೆಮಜಲು ಶಿಕ್ಷಕನ ವಿರುದ್ಧ ದೂರು
ಪುತ್ತೂರು: ಸರ್ಕಾರಿ ಪ್ರೌಢಶಾಲಾ ಶಿಕ್ಷಕರೊಬ್ಬ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನಿಂದಿಸಿ ಅವಹೇಳನ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟ್ ಹಾಕಿದ್ದು, ಈ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಪಾಪೆಮಜಲು ಸರ್ಕಾರಿ ಪೌಢಶಾಲಾ ಶಿಕ್ಷಕ ಹರಿಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಗ್ಯಾರಂಟಿ ಯೋಜನೆಗಳ ವಿರುದ್ಧ ಪೋಸ್ಸ್ ಹಾಕಿದ್ದಾರೆ. ಶಿಕ್ಷಕನಾಗಿ ಮಕ್ಕಳ ಬದುಕಿಗೆ ಅರ್ಥ ಕಲ್ಪಿಸುವ ಬದಲು ಈತ ರಾಜಕೀಯ ದುರುದ್ದೇಶ ಪೂರಿತನಾಗಿ ರಾಜ್ಯ ಸರ್ಕಾರವನ್ನು ಟೀಕಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಈತ ಅದೇ ಸರ್ಕಾರದ ವಿರುದ್ಧ ಮಾತನಾಡುವುದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬಡವರ ಪರ ಯೋಜನೆಗಳನ್ನು ಅವಹೇಳನ ಮಾಡಿದ್ದಾನೆ. ಈತ ಸರ್ಕಾರಿ ನೌಕರ ಹುದ್ದೆಯಲ್ಲಿ ಮುಂದುವರಿಯಲು ಅನರ್ಹನಾಗಿದ್ದಾನೆ. ಈತನನ್ನು ತಕ್ಷಣ ಶಿಕ್ಷಕ ಹುದ್ದೆಯಿಂದ ಅಮಾನತುಗೊಳಿಸುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸರ್ಕಾರಿ ನೌಕರನೊಬ್ಬ ಯಾವುದೇ ಸಚಿವ, ಸಂಸದ, ಶಾಸಕ, ಮುಖ್ಯಮಂತ್ರಿ, ಪ್ರಧಾನಿ ಅವರನ್ನು ಅವಹೇಳನ ಮಾಡಬಾರದು ಎಂಬ ನಿಯಮವಿದ್ದರೂ ಈತ ರಾಜಕೀಯ ಹಿನ್ನಲೆಯಿಂದ ಇಂತಹ ಕೃತ್ಯ ಎಸಗಿದ್ದಾನೆ. ಈ ಶಿಕ್ಷಕನ ವಿರುದ್ಧ ಕಾನೂನುಕ್ರಮ ಕೈಗೊಂಡು ಅಮಾನತು ಮಾಡದಿದ್ದರೆ ಪುತ್ತೂರು ಶಾಸಕ ಮೂಲಕ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಶಿಕ್ಷಕನಿಗೆ ನೋಟೀಸು:
ಶಿಕ್ಷಕರು ಸಮಾಜಿಕ ಜಾಲತಾಣದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ದೂರು ಬಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಆ ಶಿಕ್ಷಕನಿಗೆ ನೋಟೀಸು ನೀಡಲಾಗುವುದು. ಇದಕ್ಕೆ ಶಿಕ್ಷಕ ಉತ್ತರ ನೀಡಬೇಕಾಗುತ್ತದೆ. ಆತನ ಮೇಲೆ ಕ್ರಮ ಕೈಗೊಳ್ಳಲು ದೂರುದಾರರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಬೇಕಾಗುತ್ತದೆ. ಅಲ್ಲಿ ತನಿಖೆ ನಡೆದ ಬಳಿಕ ಶಿಕ್ಷಣ ಇಲಾಖೆಯಿಂದ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ಪತ್ರಿಕೆಗೆ ತಿಳಿಸಿದ್ದಾರೆ.