
ಶಿಕ್ಷಕರಿಗಾಗಿ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ
ಪುತ್ತೂರು: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಮತ್ತು ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ವತಿಯಿಂದ ಬಿಳಿನೆಲೆ ಗ್ರಾಮ ಪಂಚಾಯಿತಿ ಕಚೇರಿಯ ಜಗಲಿಯಲ್ಲಿ ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗಿದೆ.
ವಿದ್ಯಾರ್ಥಿಗಳ ಕೊರತೆಯಿಂದ ಈ ವರ್ಷದ ಶೈಕ್ಷಣಿಕ ಆರಂಭದಲ್ಲಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದಾಗ ಊರವರು ಇಲಾಖೆಯ ಗಮನ ಸೆಳೆದು ಸ್ಥಳಕ್ಕೆ ಬಂದ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್ ಒರ್ವ ಶಿಕ್ಷಕರು ಹಾಗೂ ಒರ್ವ ಅತಿಥಿ ಶಿಕ್ಷಕರ ನಿಯೋಜಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಒರ್ವ ಖಾಯಂ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಬಳಿಕ ಊರವರು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಅತಿಥಿ ಶಿಕ್ಷಕರ ನಿಯೋಜಿಸದೇ ಇರುವುದರಿಂದ ಆರಂಭದಲ್ಲಿ 13 ವಿದ್ಯಾರ್ಥಿಗಳಿದ್ದ ಇದೀಗ ೪ಕ್ಕೆ ಇಳಿದಿದೆ. ಇದಕ್ಕೆಲ್ಲ ಇಲಾಖೆಯ ಕಾರಣವಾಗಿದೆ. ಇಲ್ಲಿರುವ ಖಾಯಂ ಶಿಕ್ಷಕರು ಕರ್ತವ್ಯ ನಿಮಿತ್ತ ಹೊರ ಹೋಗುವ ಸಂದರ್ಭದಲ್ಲಿ ಇಲ್ಲಿ ಶಿಕ್ಷಕರಿಲ್ಲದೇ ಸಮಸ್ಯೆ ಆಗುತ್ತಿದೆ ತಕ್ಷಣ ಮತ್ತೋರ್ವ ಖಾಯಂ ಶಿಕ್ಷಕರನ್ನು ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಶುಕ್ರವಾರ ಸಂಜೆಯವರೆಗೆ ನಡೆದ ಪ್ರತಿಭಟನೆ ಸೋಮವಾರದಿಂದ ಮತ್ತೆ ಅತಿಥಿ ಶಿಕ್ಷಕ ನಿಯೋಜಿಸುವ ಬೇಡಿಕೆ ಇಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷೆ ಸೌಮ್ಯ, ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಸಂಚಾಲಕ ವಿನೀಶ್ ಬಿಳಿನೆಲೆ, ನಿರ್ದೇಶಕ ರಾಮಕೃಷ್ಣ ಹೊಳ್ಳಾರು, ಎಸ್ಡಿಎಂಸಿ ಮಾಜಿ ಅಧಕ್ಷ ಸುಕುಮಾರ ಚೇರು, ಊರವರಾದ ಮಮತಾ ಚೇರು, ರಾಜೇಶ್ವರಿ, ಗಿರಿಜಾ ಗೋಪಾಳಿ, ಅಕ್ಷತಾ ಗೋಪಾಳಿ, ತೀರ್ಥ ಗೋಪಾಳಿ, ಲಕ್ಷ್ಮೀ ಗೋಪಾಳಿ, ವಿಮಲ ಗೋಪಾಳಿ, ದೇವಪ್ಪ ಗೋಪಾಳಿ, ಹರೀಶ್ ಚೇರು, ಪುರಂದರ ಗೋಪಾಳಿ, ಪ್ರವೀಣ್ ಭಾಗ್ಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.