
ಸಾಹಿತ್ಯದಿಂದ ಮಹಿಳೆಯರ ಅಂತಃಸುಖ ಹಾಗೂ ಮಹಿಳಾ ಸಬಲೀಕರಣ ಸಾಧ್ಯ: ಡಾ. ಪ್ರಮೀಳಾ ಮಾಧವ
ಧರ್ಮಸ್ಥಳ: ಮಹಿಳೆಯರು ಸಾಹಿತ್ಯ ಓದಬೇಕು, ಅದು ಅವರ ವ್ಯಕ್ತಿತ್ವ ಬೆಳಗಿಸುತ್ತದೆ. ಸಾಹಿತ್ಯದಿಂದ ಮಹಿಳೆಯರ ಅಂತಃಸುಖ ಹಾಗೂ ಮಹಿಳಾ ಸಬಲೀಕರಣ ಸಾಧ್ಯ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನದ ಅಧಿವೇಶನದಲ್ಲಿ ’ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮಹಿಳೆಯರು ಶ್ರಮಜೀವಿಗಳಾಗಿದ್ದು, ಸಾಹಿತ್ಯ ಅಧ್ಯಯನವಿಲ್ಲದೆಯೂ ಜೀವನ ಅನುಭವ ಹೊಂದಿದ್ದಾರೆ. ಅಕ್ಷರವಿಲ್ಲದ ಮಹಿಳೆಯರು ಕೂಡ ಉನ್ನತವಾಗಿ ಬದುಕಿದ್ದಾರೆ. ಆದರೆ, ಸಾಹಿತ್ಯ ಅಧ್ಯಯನ ಕೊರತೆಯು ಹಲವು ತೊಂದರೆ ಉಂಟುಮಾಡಲಿದ್ದು, ಲಿಂಗ ಭೇದವಿಲ್ಲದೆ ಸಾಹಿತ್ಯ ಬೇಕು. ಅದರಿಂದ ಸಾಮರಸ್ಯ, ಸಹಕಾರದಿಂದ ದೇಶ ಕಟ್ಟಬೇಕು ಎಂದರು.
ಮಹಿಳೆಯರ ವಿರುದ್ಧದ ಅನ್ಯಾಯವನ್ನು ವಿರೋಧಿಸಿ ಸಾಹಿತ್ಯದಲ್ಲಿ ಪ್ರತಿಭಟನೆಯ ದಾಟಿ ಕೂಡ ವ್ಯಕ್ತವಾಗಿದೆ.ಸಿದ್ದ, ಸಭಲ ಪಾತ್ರವನ್ನು ಸ್ತ್ರೀ ಪಾತ್ರಗಳನ್ನು ಕೂಡ ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಅತ್ತಿಮಬ್ಬೆ, ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ, ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮ ನಿರಂಜನ ಮುಂತಾದ ಮಹಿಳೆಯರು ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಜನಪದ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ವೇದ ಕಾಲದಲ್ಲಿ ಮಹಿಳೆಯರಿಗೆ ಎಲ್ಲಾ ಅವಕಾಶಗಳಿದ್ದವು, ಕಾಲಕ್ರಮೇಣ ಅದು ಕಡಿಮೆಯಾಗಿದೆ. ಹೆಣ್ಣು ಮಕ್ಕಳ ಅಭಿರುಚಿಗೆ ತಕ್ಕ ಅವಕಾಶಗಳು ಸಿಗಬೇಕು. ಮಹಿಳೆ ತನಗೆ ಸಿಕ್ಕ ಎಲ್ಲಾ ಕೆಲಸವನ್ನು ನಿಭಾಯಿಸುತ್ತಾಳೆ. ಆದರೆ ಅದು ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು. ಸಾಹಿತ್ಯಕ್ಕೆ ಮನುಷ್ಯನ ಅಂತರಂಗ ಹಾಗೂ ಬಹಿರಂಗವನ್ನು ಅನಾವರಣಗೊಳಿಸುವ ಶಕ್ತಿಯಿದೆ. ಅವು ಜೀವನ ಮೌಲ್ಯ ಕೊಟ್ಟಿದೆ. ಸಾಹಿತ್ಯ ಬದುಕುವ ದಾರಿ ಕಲಿಸಿಕೊಡುತ್ತದೆ ಎಂದು ಹೇಳಿದರು.
ಮಹಿಳೆ ಮತ್ತು ಪುರುಷರು ಸೇರಿ ಸಮಾಜವನ್ನು ಹೇಗೆ ಉದ್ಧಾರ ಮಾಡಬಹುದು ಎನ್ನುವುದಕ್ಕೆ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಗಳು ಮಾದರಿಯಾಗಿದ್ದಾರೆ. ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.