
ಪರಂಪರೆಯ ಮೌಲ್ಯಗಳಿಂದ ಅರಿವಿನ ಬೆಳಕು: ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ: ಸಾಹಿತ್ಯವು ಮನುಷ್ಯನ ಸಂವೇದನೆಗಳನ್ನು ಮಾನವೀಯಗೊಳಿಸಿ ಪರಂಪರೆಯ ಮೌಲ್ಯಗಳ ಮೂಲಕ ಅರಿವಿನ ಬೆಳಕನ್ನು ನೀಡುತ್ತದೆ. ಭಾವನಾತ್ಮಕ ಸಂಬಂಧಗಳನ್ನು ಬೆಸೆದು, ಅಮೂರ್ತವನ್ನು ಮೂರ್ತಗೊಳಿಸುವ ಜ್ಞಾನದೀವಿಗೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನದ ಅಧಿವೇಶನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತ್ಯ ಅಂತರಂಗವನ್ನು ಸೂಕ್ಷ್ಮವಾಗಿ ಶೋಧಿಸುತ್ತದೆ. ಜನರ ಹೃದಯಗಳನ್ನು ಬೆಸೆದು ಮನುಷ್ಯತ್ವವನ್ನು ಜಾಗೃತಗೊಳಿಸುತ್ತದೆ. ನವ ಸಮಾಜವನ್ನು ಕಟ್ಟುವ ಕನಸು ಕಂಡ ಸುಧಾರಣಾಕಾರು ಸಾಹಿತ್ಯದ ಮೂಲಕ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದರು. ಸಾಹಿತ್ಯವು ಜನರಿಗೆ ಮನರಂಜನೆಯ ಜೊತೆಗೆ ಜೀವನಾನುಭವ ನೀಡಿ ಬದುಕಿಗೆ ಪ್ರೇರಣೆ ನೀಡಿತು ಎಂದು ಹೇಳಿದರು.
ಡಿಜಿಟಲ್ ಯುಗದಲ್ಲಿ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾಗಿದೆ. ಹೊಸ ಬರಹಗಾರರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ಧಾರೆ. ಹೀಗಿದ್ದರೂ ಸಾಹಿತ್ಯದ ಗುರಿ ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದಾಗಿದೆ ಎಂದರು.
ಕಲೆ ಮತ್ತು ಸಾಹಿತ್ಯ ಬುದ್ದಿಯನ್ನು ಅರಳಿಸಿ, ಭಾವವನ್ನು ಅರಳಿಸುತ್ತದೆ. ಬೌಧಿಕ ಚಿಂತನೆಗಳನ್ನು ವಿಕಾಸಗೊಳಿಸುವ ಸಾಹಿತ್ಯ ಕೃಷಿಯಿಲ್ಲದೆ ಸಮಾಜ ಸತ್ವಹೀನವಾಗುತ್ತದೆ. ಆದ್ದರಿಂದ ಸಾಹಿತ್ಯವನ್ನು ಬರೆಯುವ, ಓದುವ ಮತ್ತು ಸಾಹಿತ್ಯ ಚಿಂತನ ಮಂಥನದ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.