ಬಂಗ್ರಕೂಳೂರು: 55 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ ಚಾಲನೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಗ್ರಕೂಳೂರು ಶ್ರೀ ಕೋರ್ದಬ್ಬು ದೈವಸ್ಥಾನ ರಸ್ತೆಯನ್ನು 55 ಲಕ್ಷ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದ್ದು ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಹಾಲಿ ಮೇಯರ್ ಮನೋಜ್ ಕುಮಾರ್ ಅವರು ಅನುದಾನ ಬಿಡುಗಡೆಗೆ ಸಹಕರಿಸಿದ್ದಾರೆ. ಸ್ಥಳೀಯರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಸ್ಥಳೀಯವಾಗಿ ಪಾಲಿಕೆಯ ನಿಧಿಯಿಂದಲೇ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯಕಿರಣ್ ಕುಮಾರ್ ಕೋಡಿಕಲ್ ಅವರು ಪ್ರಾಸ್ತಾವಿಸಿ, ಮಳೆಗಾಲ ಸಹಿತ ಇಲ್ಲಿನ ರಸ್ತೆ ಕೆಸರಿನಿಂದ ಕೂಡಿದ್ದು ದೈವಸ್ಥಾನ, ಬಡಾವಣೆಯಿರುವ ಸ್ಥಳವಾಗಿದೆ. ಶಾಸಕರಲ್ಲಿ ಮನವಿ ಮಾಡಿದ ಮೇರೆಗೆ ಪಾಲಿಕೆಯಲ್ಲಿ ಅನುದಾನ ಮೀಸಲಿರಿಸಿ ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದರು.
ಮೇಯರ್ ಮನೋಜ್ ಕುಮಾರ್ ಕೋಡಿಕಲ್, ನಿಕಟಪೂರ್ವ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಉಮೇಶ್, ಮಲರಾಯನ ಸಾನ, ನವನೀತ್ ಕೋಟ್ಯಾನ್, ಲತೀಶ್, ಕೋರ್ದಬ್ಬು ದೈವಸ್ಥಾನದ ಪ್ರಮುಖರು, ಗುತ್ತಿಗೆದಾರ ಕೆ.ಸಿ., ಬಡವಾಣೆ ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.