ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ-2024
ಮನಸ್ಸು ಮತ್ತು ದೇಹ ಸದೃಢವಾಗಿದ್ದರೆ ಮಾತ್ರ ಸಾಧನೆ ಸಾಧ್ಯ: ಪಿ. ಶ್ರೀಧರ್ ಆಭಿಮತ
ಮೂಡುಬಿದಿರೆ: ಎಲ್ಲರನ್ನು ಗೌರವಿಸುವ ಮನೋಭಾವವನ್ನು ಮೈಗೂಡಿಸಿಕೊಂಡಾಗ ಬದುಕು ಸೃಜನಾತ್ಮಕವಾಗುತ್ತದೆ. ಮನುಷ್ಯ ದೈಹಿಕವಾಗಿ ಆರೋಗ್ಯವಾಗಿದ್ದರೆ ಶೈಕ್ಷಣಿಕವಾಗಿ ಏನನ್ನಾದರೂ ಸಾಧಿಸಬಹುದು. ಅಂತಹ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ. ಮನಸ್ಸು ಮತ್ತು ದೇಹ ಸದೃಢವಾಗಿದ್ದರೆ ಮಾತ್ರ ಸಾಧನೆ ಸಾಧ್ಯ. ಮನುಷ್ಯನ ಉತ್ತಮ ಆರೋಗ್ಯಕ್ಕೆ ಉತ್ತಮ ಬೆಳಕು ಗಾಳಿ ನೀರು ಬಹಳ ಮುಖ್ಯ ಅಂತಹ ವಾತವರಣ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿದೆ. ನಾವು ಗಡಿಯಾರದ ಸಂಖ್ಯೆಗಳಾಗದೆ ಮುಳ್ಳುಗಳ ಹಾಗೆ ಜೀವಿಸಬೇಕು ಎಂದು ಮೂಡುಬಿದಿರೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪಿ. ಶ್ರೀಧರ್ ಹೇಳಿದರು.
ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡೋತ್ಸವವು ಕೇವಲ ಶಾರೀರಿಕ ಚಟುವಟಿಕೆಗಳಿಗಷ್ಟೆ ಸೀಮಿತವಲ್ಲ ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹ ಮಹತ್ವಪೂರ್ಣವಾಗಿದೆ. ಇದು ಪ್ರತಿಯೊಬ್ಬರಲ್ಲಿಯೂ ಅಂತರ್ಗತವಾಗಿರುವ ಸಾಮರ್ಥ್ಯಗಳನ್ನು ಅನಾವರಣ ಮಾಡುವ ಉತ್ತಮ ವೇದಿಕೆ. ಭಾಗವಹಿಸುವ ಎಲ್ಲರೂ ತಮ್ಮ ಶಕ್ತಿಯನ್ನು ಪರೀಕ್ಷಿಸುವ ಮತ್ತೊಬ್ಬರಿಂದ ಹೊಸದನ್ನು ಕಲಿಯುವ ಮತ್ತು ಸಹಕಾರದ ಮಹತ್ವವನ್ನು ಅರಿತುಕೊಳ್ಳುವ ಅವಕಾಶವನ್ನು ಪಡೆಯಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ನಿಮ್ಮಲ್ಲಿರುವ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಸಾಧಕರಾಗಿ. ಸಾಧಕನಾಗಬೇಕಾದವನು ಸೋಮಾರಿಯಾಗದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢನಾಗಿ ಸಾಧನೆಯ ಪಥದಲ್ಲಿ ಮುನ್ನಡೆದಾಗ ಯಶಸ್ಸು ನಿಮ್ಮ ಹಿಂದೆ ಬರುತ್ತದೆ ಎಂದು ಹೇಳಿದರು.
ಈ ಕ್ರೀಡಾ ಕೂಟ ‘ಆರೋಗ್ಯಕ್ಕಾಗಿ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಮೂಡುಬಿದಿರೆ ಮಹಾವೀರ ಕಾಲೇಜಿನ ಕೀರ್ತಿನಗರ ವೃತ್ತದಿಂದ ಮ್ಯಾರಥಾನ್ ನಡಿಗೆಯೊಂದಿಗೆ ಆರಂಭಗೊಂಡಿತು.
ಮೂಡುಬಿದಿರೆಯ ಪ್ರಸಿದ್ಧ ವೈದ್ಯ ಡಾ ಜಯಗೋಪಾಲ್ ತೋಳ್ಪಾಡಿ ಈ ಮ್ಯಾರಥಾನ್ನನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೈಹಿಕ ಆರೋಗ್ಯ ಸಾಮಾಜಿಕ ಆರೋಗ್ಯ ಎರಡು ಕೂಡ ಈ ಸಮಾಜದ ಅವಿಭಾಜ್ಯ ಅಂಗಗಳು. ದೈಹಿಕ ಆರೋಗ್ಯಕ್ಕಾಗಿ ಸ್ವಚ್ಛತೆ ನಮ್ಮ ಬದುಕಿನ ಆದರ್ಶಗಳಾಗಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಅರ್ಹತ್ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಅರ್ಹತ್ ಬಿಲ್ಡರ್ಸ್ ಹಾಗೂ ಡೆವಲಪರ್ರ್ಸ್ನ ಸಂಸ್ಥಾಪಕ ಪೃಥ್ವಿರಾಜ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಸುರೇಶ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಅಧ್ಯಪಕರುಗಳಾದ ವಿಕ್ರಂ ನಾಯ್ಕ್ ಸ್ವಾಗತಿಸಿ, ಡಾ. ವಾದಿರಾಜ್ ಕಲ್ಲೂರಾಯ, ಪ್ರಿಯಾಂಕ ಅತಿಥಿಗಳನ್ನು ಪರಿಚಯಿಸಿದರು. ವೈಶಾಲಿ ವಂದಿಸಿ, ಪ್ರಸಾದ್ ನಿರೂಪಿಸಿದರು.


