ಗುರು ಪುಟ್ಟರಾಜು ಗವಾಯಿಗೆ ಪ್ರಶಸ್ತಿ ಅರ್ಪಣೆ: 30ನೇ ವರ್ಷದ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್

ಗುರು ಪುಟ್ಟರಾಜು ಗವಾಯಿಗೆ ಪ್ರಶಸ್ತಿ ಅರ್ಪಣೆ: 30ನೇ ವರ್ಷದ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್


ಮೂಡುಬಿದಿರೆ: ಶಿಷ್ಯರ ಒಳಿತನ್ನೇ ಬಯಸುವ ಗುರು ನಮಗೆಲ್ಲರಿಗೂ ಬಹಳ ಮುಖ್ಯವಾಗುತ್ತಾರೆ. ನನ್ನಂತಹ ಹಳ್ಳಿಯ ಬಡ ವಿದ್ಯಾರ್ಥಿಗೆ 12 ವರ್ಷಗಳ ಕಾಲ ಕುರುಕುಲ ಪದ್ಧತಿಯ ಶಿಕ್ಷಣ, ಊಟ, ವಸತಿ ನೀಡಿ ತನ್ನಲ್ಲಿ ಹಿಂದೂಸ್ಥಾನಿ ಸಂಗೀತ ರಾಜ್ಯದಲ್ಲಿ ಬೆಳಗಲು ಕಾರಣೀಕರ್ತರಾಗಿರುವ ತನ್ನ ಗುರು ಪುಟ್ಟರಾಜ ಗವಾಯಿ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಣೆ ಮಾಡುತ್ತೇನೆ ಎಂದುಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಡಿ. ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರು ದಿನಗಳ ಕಾಲ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುವ 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಎರಡನೇಯ ದಿನವಾಗಿರುವ ಬುಧವಾರ ಸಂಜೆ ‘ಆಳ್ವಾಸ್ ವಿರಾಸತ್ 2024’ರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ ಡಾ.ಎಂ. ಮೋಹನ ಆಳ್ವ ಅವರ ಸಾಧನೆ ಅನನ್ಯ. ಅವರಿಂದ 101 ವರ್ಷ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.

ಪ್ರಶಸ್ತಿ ನಮ್ಮನ್ನು ಹುಡುಕಿಕೊಂಡು ಬರಬೇಕು ಹೊರತು ನಾವು ಅದರ ಹಿಂದೆ ಹೋಗಬಾರದು ಎಂದು ಕಿವಿಮಾತು ಹೇಳಿದರು.

ಅದಕ್ಕೂ ಮೊದಲು, ಕಲೆ-ಸಂಸ್ಕೃತಿಯ ಸಮ್ಮಿಲನದ ಸ್ವರೂಪದಂತೆ ಅಲಂಕೃತ ಗೊಂಡ ವಿರಾಸತ್‌ನ ಬಯಲು ರಂಗಮಂದಿರದ ಬೃಹತ್ ವೇದಿಕೆಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಸಾಂಪ್ರದಾಯಿಕ ಗೌರವದ ಅಪ್ಸರೆಯರ ಜೊತೆಯಾದ ಸ್ಯಾಕ್ಸೋಫೋನ್, ಗಟ್ಟಿಮೇಳ, ಚೆಂಡೆ, ಛತ್ರಿ ಚಾಮರ ಮತ್ತಿತರ ಗೌರವ ವಾದ್ಯಪರಿಕರಗಳ ನಿನಾದಗಳ ಮೂಲಕ ಕರೆತರಲಾಯಿತು. 

ವೇದಿಕೆಯ ಗೌರವ ಪೀಠದಲ್ಲಿ ಕುಳ್ಳಿರಿಸಿ, ಆರತಿ ಬೆಳಗಿ ಹಾರ ಹಾಕಿ ಗೌರವಿಸಲಾಯಿತು. ಹೂ, ಪನ್ನೀರು, ಗಂಧ, ಚಂದನದ ಮೂಲಕ ಸಾಂಪ್ರದಾಯಿಕ ಗೌರವ ನೀಡಲಾಯಿತು.    

‘ಸ ಎಂದರೆ ಸಂಗೀತ ಸಾಗರ.. ಆರತಿಯು...’ ಹಾಡಿನ ಮೂಲಕ ಅಭಿವಂದನೆ ಸಲ್ಲಿಸಲಾಯಿತು. ಹೂ ಹಾರ, ಶಾಲು, ಹಣ್ಣು-ಹಂಪಲು, ಪ್ರಶಸ್ತಿ ಫಲಕ, ಸ್ಮರಣಿಕೆ ಸಹಿತ ಒಂದು ಲಕ್ಷ ರೂಪಾಯಿಯ ಪುರಸ್ಕಾರ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು. 

ಆರಂಭದಲ್ಲಿ ದೀಪ ಪ್ರಜ್ವಲನ ಮಾಡಲಾಯಿತು. ಬೆಂಗಳೂರಿನ ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಕರ್ಣ ಬೆಳಗೆರೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಲ್.ಎಚ್. ಮಂಜುನಾಥ್,  ಪ್ರಮುಖರಾದ ನರೇಂದ್ರ ಎಲ್. ನಾಯಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಗಾಯಕ ಪಂಡಿತ್ ಪದ್ಮಶ್ರೀ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ಥಾನಿ ಗಾಯನ ನಡೆಯಿತು. ವಿದ್ಯಾರ್ಥಿನಿ ಮಾಧವಿ ಕಾರ್ಯಕ್ರಮ ನಿರೂಪಿಸಿದರು.

ಎರಡನೇ ಕಾರ್ಯಕ್ರಮವಾಗಿ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article