
ಮೂಡುಬಿದಿರೆ ಎಕ್ಸಲೆಂಟ್ ಸಿ.ಬಿ.ಎಸ್.ಇ. ವಾರ್ಷಿಕೋತ್ಸವ
ಮೂಡುಬಿದಿರೆ: ವಿದ್ಯಾರ್ಥಿಗಳು ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ, ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ’ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ ಬಿ ಪುರಾಣಿಕ್ ಹೇಳಿದರು.
ಎಕ್ಸಲೆಂಟ್ ಸಿಬಿಎಸ್ಈ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು’ ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಸಮಾಜ, ಗುರು ಹಿರಿಯರು ಹಾಗೂ ಸ್ನೇಹಿತರನ್ನು ಹೊಂದಿರಬೇಕು, ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದಿರುತ್ತದೆ. ಅದು ಹೊರ ಹೊಮ್ಮಬೇಕಾದರೆ ವ್ಯಕ್ತಿಗೆ ಸೂಕ್ತ ವೇದಿಕೆ ಬೇಕು, ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಬೇಕು. ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿ ಆಗದೇ ಅದು ನೈಜ ರೀತಿಯಲ್ಲಿ ಇರಬೇಕು ಎಂದು ಮುಖ್ಯ ಅತಿಥಿಗಳಾದ ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೃಷ್ಣರಾಜ ಹೆಗ್ಡೆಯವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಾದವರು ಓದು ಬರಹದ ಜೊತೆಗೆ ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ಒಳ್ಳೆಯ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಹೆತ್ತವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಶುಭ ಹಾರೈಸಿದರು.
ಪ್ರಾಂಶುಪಾಲ ಸುರೇಶ್ ಅವರು ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು.
ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತ, ಆಡಳಿತ ನಿರ್ದೇಶಕ ಬಿ.ಪಿ. ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಬಿ. ಪುಷ್ಪರಾಜ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಶಾಂತ್ ಪಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ಪೃಥ್ವಿರಾಜ್ ಹಾಗೂ ನಾಯಕಿ ಸಾತ್ವಿಕ ಉಪಸ್ಥಿತರಿದ್ದರು.
ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್ ರವರು ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಸಾತ್ವಿಕ ವಂದಿಸಿದರು.