.jpg)
ತೇರಿನ ಊರು ಕುಕ್ಕೆಯ ಜಾತ್ರೋತ್ಸವಕ್ಕೆ ಸಿದ್ದಗೊಳ್ಳುತಿದೆ ಬೆತ್ತದ ರಥ-ಕುಕ್ಕೆ ಜಾತ್ರೆಗೆ ರಥಗಳೇ ಆಕರ್ಷಣೆ: ರಥಗಳ ಹಿಂದಿದೆ ಮೂಲನಿವಾಸಿಗಳ ಕರಕೌಶಲ್ಯ: ಶ್ರದ್ಧಾ ಭಕ್ತಿಯ ಕಾಯಕ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಬಹುಪಾಲು ರಥಗಳದ್ದೆ ಆಗಿರುತ್ತದೆ. ಆದುದರಿಂದ ಕುಕ್ಕೆಗೆ ತೇರಿನ ಊರು ಎನ್ನುತ್ತಾರೆ. ತೇರಿನ ಊರಿನ ಜಾತ್ರೆಗೆ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಆಕರ್ಷಕ ಬೆತ್ತದ ರಥಗಳು ಭೂಷಣವಾಗಿದೆ. ಶ್ರೀ ಕ್ಷೇತ್ರದ ಜಾತ್ರೆಗೆ ಸಾಲಾಂಕೃತ ರಥಗಳ ನಿರ್ಮಾಣ ಕಾರ್ಯ ಭರದಿಂದ ಆರಂಭಗೊಂಡಿದೆ. ಕುಕ್ಕೆ ಕ್ಷೇತ್ರದ ಜಾತ್ರಾ ಮಹೋತ್ಸವಕ್ಕಾಗಿ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ತಮ್ಮ ಅದ್ಬುತ ಕೈಚಳಕದಿಂದ ತೇರನ್ನು ಸಿದ್ದಗೊಳಿಸುವ ಕಾಯಕವನ್ನು ಹಗಲಿರುಳೆನ್ನದೆ ಶ್ರಮ ವಹಿಸಿ ನಡೆಸುತ್ತಿದ್ದಾರೆ.ಇವರ ಕೈಚಳಕದಲ್ಲಿ ಬೆತ್ತದ ರಥ ನಿರ್ಮಾಣ ಕಾರ್ಯವು ನಡೆಯುತ್ತಿದೆ.
ಕಾರ್ತಿಕ ಹುಣ್ಣಿಮೆಯಂದು ವೀಳ್ಯ:
ಕಾರ್ತಿಕ ಮಾಸದ ಶುದ್ಧ ಪೌರ್ಣಮಿ ದಿನ ಸಹಸ್ರನಾಮಾರ್ಚನೆಯ ಬಳಿಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತವನ್ನು ಕ್ಷೇತ್ರ ಪುರೋಹಿತರು ವೈದಿಕ ವಿದಿ ವಿಧಾನ ನೆರವೇರಿಸಿದರು. ನಂತರ ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಗಂಧ ಪ್ರಸಾದದ ರೂಪದಲ್ಲಿ ರಥ ಕಟ್ಟಲು ವೀಳ್ಯವನ್ನು ನೀಡಿದರು. ದೇವಳದ ಪಾಟಾಳಿಯವರ ನಿರ್ದೇಶನದಂತೆ, ಗುರಿಕಾರರ ನೇತೃತ್ವದಲ್ಲಿ ಶ್ರೀ ದೇವಳದಿಂದ ಪಡಿಯಕ್ಕಿ ಪಡೆದು ರಥಕಟ್ಟುವ ಬೆತ್ತದ ಹಗ್ಗ (ಮುರಿಹಗ್ಗ) ತರಲು ಕಾಡಿಗೆ ತೆರಳಿ ಸುಮಾರು ೪ ದಿನಗಳ ಕಾಲ ಕಾಡಿನಲ್ಲಿ ಬೆತ್ತದ ಹಗ್ಗ ಸಂಗ್ರಹಿಸಿ ಐದನೇ ದಿನ ಕ್ಷೇತ್ರಕ್ಕೆ ಆಗಮಿಸಿ ರಥ ನಿರ್ಮಾಣ ಕಾರ್ಯ ಆರಂಭಿಸಿದ್ದರು.
ಬೆತ್ತದ ರಥ:
ಯಾವುದೇ ಹಗ್ಗವನ್ನು ಬಳಸದೇ ಬೆತ್ತಗಳಿಂದಲೇ ವಿಶಿಷ್ಟವಾದ ಸುಂದರ ರಥವನ್ನು ಮೂಲ ನಿವಾಸಿಗಳು ನಿರ್ಮಿಸುತ್ತಿದ್ದಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಕುಕ್ಕೆ ಕ್ಷೇತ್ರದ ಜಾತ್ರೆಯಲ್ಲಿ ರಥಗಳು ಪ್ರಧಾನವಾಗಿವೆ. ಆದುದರಿಂದ ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿಕೊಂಡು ಪವಿತ್ರವಾದ ರಥಗಳನ್ನು ಪೂರ್ವಶಿಷ್ಠ ಸಂಪ್ರದಾಯದ ನಿರ್ಮಿಸುವ ಕಾರ್ಯವನ್ನು ಭಕ್ತಿ ಶ್ರದ್ಧೆಯಿಂದ ನಡೆಸುತ್ತಿದ್ದಾರೆ.
8 ಆಕಾರದ ಬೆತ್ತ:
ಸುಬ್ರಹ್ಮಣ್ಯದಲ್ಲಿ ಯಾವುದೇ ಹಗ್ಗ ಉಪಯೋಗಿಸದೆ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಉಪಯೋಗಿಸಿ ರಥವನ್ನು ಕೌಶಲ್ಯಪೂರಿತವಾಗಿ ನಿರ್ಮಿಸುತ್ತಿದ್ದಾರೆ. ಬಾರಿ ಗಾತ್ರದ ಬೆತ್ತವನ್ನು 8 ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು ಅನಂತರ ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ಬ್ರಹ್ಮರಥದದ ಮೆಲ್ಭಾಗವನ್ನು ರಚಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ ಬದಲಾಗಿ ಬೆತ್ತವನ್ನು ಹೂವನ್ನು ಸುರಿಯುವ ಮಾದರಿಯಲ್ಲಿ ಸುರಿದು ರಥವನ್ನು ಗಟ್ಟಿ ಮಾಡಲಾಗುತ್ತದೆ. ಈ ಕಾರ್ಯದಲ್ಲಿ ಇದೀಗ ಮೂಲನಿವಾಸಿಗಳು ಶ್ರದ್ಧೆಯಿಂದ ನಿರತರಾಗಿದ್ದಾರೆ.ರಥಗಳನ್ನು ಅತ್ಯಂತ ವಿಶಿಷ್ಟ ಪೂರ್ಣ ಮತ್ತು ಸುಂದರವಾಗಿ ನಿರ್ಮಿಸುವ ಕೈಂಕರ್ಯವನ್ನು ಇವರು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಹಿರಿಯರೊಂದಿಗೆ ಯುವ ಜನಾಂಗವೂ ಕೂಡಾ ಶ್ರೀದೇವರ ಈ ಸೇವೆಯಲ್ಲಿ ಭಾಗವಹಿಸುತ್ತಾ ಕಾರ್ಯಪ್ರವೃತ್ತರಾಗಿದ್ದಾರೆ.
ರಥ ಕಟ್ಟಲು ಬೆತ್ತದ ಸೀಳು:
ರಥ ಕಟ್ಟಲು ಒಬ್ಬರು 5 ರಂತೆ 250 ಕ್ಕೂ ಅಧಿಕ ಮುರಿಹಗ್ಗ(ಬೆತ್ತದ ಹಗ್ಗ) ಬಳಸುತ್ತಾರೆ. ಬ್ರಹ್ಮರಥಕ್ಕೆ ಸುಮಾರು 200 ತುಂಡು ಬಿದಿರನ್ನು ಬಳಸಲಾಗುತ್ತದೆ. ಅಲ್ಲದೆ ಮೇಲಿಂದ ಕೆಳಗೆ 100ಕ್ಕೂ ಅಧಿಕ ಅರುಗಳನ್ನು ಅಳವಡಿಸಲಾಗುವುದು. ಮಹಾರಥದ ಐದು ಅಂತಸ್ತುಗಳಿಗೆ ೮ ಆಕಾರದಲ್ಲಿ ಬೆತ್ತವನ್ನು ಸುತ್ತಲಾಗುತ್ತದೆ. ಸುಮಾರು 20ರಿಂದ 25 ಬೆತ್ತಗಳನ್ನು ಒಂದಾಗಿಸಿ 8 ಆಕೃತಿಯ ಬೆತ್ತವನ್ನು ರಚಿಸಲಾಗುತ್ತದೆ.ಆದರೂ 8 ಆಕೃತಿಯ ರಚನೆಗೆ ಬಳಸುವ ಬೆತ್ತದ ಸಂಖ್ಯೆಯು ಬೆತ್ತದ ಸಾಂದ್ರತೆಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತದೆ. ಸುಮಾರು 7000 ಪತಾಕೆಗಳನ್ನು ಬ್ರಹ್ಮರಥಕ್ಕೆ ಅಳವಡಿಸಲಾಗುತ್ತದೆ. ಬಳಿಕ ಫಲವಸ್ತುಗಳು, ಹೂ, ಬಾಳೆ, ಮಾವಿನ ಎಲೆಗಳಿಂದ ಸಿಂಗಾರ ಮಾಡಲಾಗುವುದು. ನಂತರ ರಥ ಎಳೆಯುವ ಬೆತ್ತವನ್ನು ಅಳವಡಿಸಲಾಗುತ್ತದೆ. ಸುಮಾರು 6ಅಡಿ ಉದ್ದದ 12 ಬೆತ್ತವನ್ನು ಬ್ರಹ್ಮರಥವನ್ನು ಎಳೆಯಲು ಬಳಸಲಾಗುತ್ತದೆ. ಇದೀಗ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಹಿರಿಯರ ಮಾರ್ಗದರ್ಶನದಂತೆ ರಥನಿರ್ಮಾಣ ಕಾರ್ಯ ನಡೆಯುತ್ತಿದೆ.
ಗುರು ಇಲ್ಲದ ಕಾಯಕ:
ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ರಥದ ಕೆಲಸ ಆರಂಭಿಸಿದ್ದಾರೆ. ರಥದ ಮೇಲ್ಭಾಗವನ್ನು ಬೆತ್ತದಿಂದಲೇ ನಿರ್ಮಿಸಲಾಗುತ್ತಿದೆ. ರಥ ಎಳೆಯಲು ಕೂಡಾ ಬೆತ್ತವನ್ನೇ ಬಳಸುವುದು ವಿಶೇಷ, ಉಳಿದಂತೆ ರಥಕಟ್ಟಲು ಬೆತ್ತದ ಸೀಳುಗಳನ್ನು ಬಳಸಿದರೆ,ಎಳೆಯಲು ಉಪಯೋಗಿಸುವ ಬೆತ್ತ ಮಾತ್ರ ಇಡಿಯಾಗಿರುತ್ತದೆ. ಈ ರೀತಿಯಾಗಿ ಆಕರ್ಷಕ ಶೈಲಿಯಲ್ಲಿ ರಥವನ್ನು ನಿರ್ಮಿಸಿ, ಇದಕ್ಕೆ ಬಟ್ಟೆಯ ಪತಾಕೆಗಳಿಂದ ಸಿಂಗರಿಸುತ್ತಾರೆ. ರಥಗಳ ಗಾಂಭೀರ್ಯತೆ, ಅದರ ಶೈಲಿ, ಆಕರ್ಷಣೆಗಳು ಹಾಗೂ ರಥಗಳ ವಿನ್ಯಾಸಗಳು ಇವರ ಅತ್ಯುತ್ತಮ ರಚನಾ ಕೌಶಲ್ಯವನ್ನು ತೆರೆದಿಡುತ್ತದೆ. ಗುರು ಇಲ್ಲದ ಈ ಕಾಯಕವನ್ನು ಹಿರಿಯರ ರಚನಾ ಕೌಶಲ್ಯವನ್ನು ನೋಡಿ ಕಲಿತಿದ್ದಾರೆ ಎನ್ನುವುದು ವಿಶೇಷ. ಬ್ರಹ್ಮರಥ, ನಿರ್ಮಿಸುವ ಕಾರ್ಯವನ್ನು ಇದೀಗ ನಡೆಸುತ್ತಿದ್ದಾರೆ. ಹಿರಿಯರು ಹಾಗೂ ಯುವಕರು ರಥ ನಿರ್ಮಾಣ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತರ ರಥಗಳ ಅಲಂಕಾರವೂ ಇವರದೇ:
ನಿರಂತರವಾಗಿ ಬಿಸಿಲು, ಚಳಿ, ಗಾಳಿ ಎನ್ನದೆ ಸುಮಾರು 25ಕ್ಕೂ ಅಧಿಕ ದಿನಗಳ ಕಾಲ ಮೂಲನಿವಾಸಿ ಮಲೆಕುಡಿಯ ಜನಾಂಗದವರು ರಥ ಕಟ್ಟುವ ಸೇವೆ ಮಾಡಿ ಸಾಲಾಂಕೃತ ಮತ್ತು ಆಕರ್ಷಕ ರಥವನ್ನು ಸಂಪ್ರದಾಯಬದ್ಧವಾಗಿ ನಿರ್ಮಿಸುತ್ತಾರೆ. ಅಲ್ಲದೆ ಇದರೊಂದಿಗೆ ಪಂಚಮಿ ರಥದ ಕಾರ್ಯವನ್ನು ಕೂಡಾ ಇದೇ ವೇಳೆ ನೆರವೇರಿಸಲಾಗುತ್ತಿದೆ.ಶ್ರೀ ದೇವಳದ ಒಳಾಂಗಣದಲ್ಲಿ ಎಳೆಯುವ ಬಂಡಿ ರಥದ ಅಲಂಕಾರ, ಲಕ್ಷದೀಪೋತ್ಸವದಂದು ಎಳೆಯುವ ಪಂಚ ಶಿಖರದ ಚಂದ್ರಮಂಡಲ ರಥ ನಿರ್ಮಾಣ, ಹೂವಿನ ತೇರಿನ ಅಲಂಕಾರ ಎಲ್ಲವೂ ಮೂಲನಿವಾಸಿ ಮಲೆಕುಡಿಯ ಜನಾಂಗದವರ ಕೈಚಳದಿಂದ ಆಕರ್ಷಣೀಯವಾಗಿ ನಿರ್ಮಿತವಾಗುತ್ತದೆ.
ನಿರಂತರವಾಗಿ ಬಿಸಿಲು, ಚಳಿ, ಗಾಳಿ ಎನ್ನದೆ ಸುಮಾರು 25ಕ್ಕೂ ಅಧಿಕ ದಿನಗಳ ಕಾಲದಿಂದ ಈ ಭಾರಿ 61ಕ್ಕೂ ಅಧಿಕ ಮಂದಿ ಹಿರಿಯರು ಮತ್ತು ಕಿರಿಯರು ಜೊತೆಯಾಗಿ ರಥ ಕಟ್ಟುವ ಸೇವೆ ಮಾಡಿ ಸಾಲಾಂಕೃತ ಮತ್ತು ಆಕರ್ಷಕ ರಥವನ್ನು ಸಂಪ್ರದಾಯಬದ್ಧವಾಗಿ ನಿರ್ಮಿಸುತ್ತಿದ್ದಾರೆ.
ಹಿರಿಯ ಮಾರ್ಗದರ್ಶನ:
“ಸಾಂಪ್ರದಾಯಿಕ ಕಲೆ ಹಿರಿಯರಿಂದ ಒಲಿದು ಬಂದಿದೆ.ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕಾಯಕವನ್ನು ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯುವಕರು ಮತ್ತು ಹಿರಿಯರು ಸೇರಿ ಸೇವೆ ಸಲ್ಲಿಸುತ್ತಿದ್ದೇವೆ.ಇದು ದೇವರ ಸೇವೆಗೆ ದೊರೆತ ಪುಣ್ಯ ಅವಕಾಶವೆಂದು ಭಾವಿಸಿ ರಥ ನಿರ್ಮಾಣ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಂಡಿದ್ದೇವೆ. ಹಿರಿಯರಿಂದ ಕಲಿತ ವಿದ್ಯೆಯನ್ನು ಯುವಕರಾದ ನಾವು ಮುಂದುವರೆಸುತ್ತಾ ಬಂದಿದ್ದೇವೆ”-ಭಾಸ್ಕರ ಅರ್ಗುಡಿ, ರಥ ಕಟ್ಟುವ ತಂಡದವರು