ಲೋಕೋಪಯೋಗಿ ಇಲಾಖೆ ವತಿಯಿಂದಲೇ ಮರಳು ತೆರವು: ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವ ಸಂದರ್ಭದ ಕುಮಾರಧಾರ ನದಿಯಲ್ಲಿ ಅವಭೃತೋತ್ಸವ ನಡೆಯಲು ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿಯ ಮರಳನ್ನು ತೆಗೆಯಲು ಈಬಾರಿ ಖಾಸಗಿ ವ್ಯಕ್ತಿಗಳಿಗೆ ನೀಡದೆ ಲೋಕೋಪಯೋಗಿ ಇಲಾಖೆ ವತಿಯಿಂದಲೇ ಮರಳು ತೆರವು ಮಾಡಿ ದಾಸ್ತಾನು ಇರಿಸಲಾಗಿದ್ದು ಅಧಿಕಾರಿಗಳಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಂಪಾಷಷ್ಠಿ ಮಹಾರಥೋತ್ಸವ ಮರುದಿನ ಕುಮಾರಧಾರ ನದಿಯಲ್ಲಿ ದೇವರ ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯುವ ಕಾರಣ ಕುಮಾರಧಾರ ಸ್ನಾನಘಟ್ಟದ ಜಳಕದ ಗುಂಡಿಯ ಮರಳು ಮತ್ತು ಹೂಳನ್ನು ತೆರವುಗೊಳಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ದುರುಪಯೋಗಿಸಿಕೊಡು ಈ ಹಿಂದಿನ ವರ್ಷಗಳಲ್ಲಿ ಅಕ್ರಮ ಮರಳುಗಾರಿಕೆಯ ಆರೋಪ ಕೇಳಿಬರುತ್ತಿತ್ತು. ಲಕ್ಷಾಂತರ ಮೌಲ್ಯದ ಮರಳನ್ನು ಕಳ್ಳ ಸಾಗಾಟ ಮಾಡುವ ಆರೋಪ ವ್ಯಕ್ತವಾಗಿತ್ತು. ಆದರೆ ಈ ವರ್ಷ ಈ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.
ಜಳಕದ ಗುಂಡಿಯ ಮರಳು ತೆಗೆಯುವ ಜವಾಬ್ದಾರಿಯನ್ನು ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಗೆ ವಹಿಸಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದಲೇ ನದಿಯಲ್ಲಿನ ಮರಳನ್ನು ಟಿಪ್ಪರ್ಗೆ ಲೋಡ್ ಮಾಡಿ ಕುಲ್ಕುಂದದ ಲೋಕೋಪಯೋಗಿ ಇಲಾಖೆಯ ಐಬಿ ಜಾಗದಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ, ಭದ್ರತೆ ಕಲ್ಪಿಸಿ ಕೆಲಸ ನಿರ್ವಹಿಸಲಾಗಿದೆ. ಸುಮಾರು 180 ಲೋಡ್ ಮರಳು ದಾಸ್ತಾನುಗೊಂಡಿದ್ದು, ಮಾರುಕಟ್ಟೆ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಅರ್ಹರಿಗೆ ಕಡಿಮೆ ಬೆಲೆಗೆ ದೊರೆಯಲಿ:
ಮುಂದೆ ದಾಸ್ತಾನು ಮಾಡಲಾದ ಮರಳನ್ನು ಗಣಿ ಇಲಾಖೆ, ಕಂದಾಯ ಇಲಾಖೆ ವತಿಯಿಂದ ಮುಂದಿನ ಕ್ರಮ ವಹಿಸುವ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಇಲ್ಲಿ ದಾಸ್ತಾನು ಮಾಡಲಾದ ಮರಳನ್ನು ಸುಬ್ರಹ್ಮಣ್ಯ, ಕಡಬ ತಾಲೂಕಿನ ಅಗತ್ಯ ಇರುವ ಬಡವರ ನಿರ್ಮಾಣ ಕಾಮಗಾರಿಗಳಿಗೆ ಮರಳು ಪೊರೈಸಲು ಅಧಿಕಾರಿಗಳು ಕ್ರಮ ವಹಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.