
ಫೆ.23ರಂದು ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಸೀಸನ್-3 ರಾಜ್ಯಮಟ್ಟದ ಹಗ್ಗ ಜಗ್ಗಾಟ
Friday, February 21, 2025
ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಮೂರನೇ ಆವೃತ್ತಿಯ ರಾಜ್ಯಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಫೆ.23ರ ಭಾನುವಾರ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ. ಸಂಜೆ 4 ಗಂಟೆಗೆ ಆರೆಸ್ಸೆಸ್ ಮುಖಂಡ ಪ್ರಕಾಶ್ ಪಿ.ಎಸ್. ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ಕಿರಣ್ ಕುಮಾರ್ ಕೋಡಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕಿರಣ್ ಕುಮಾರ್, ಮೇಯರ್ ಮನೋಜ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್, ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಡಾ. ಮಂಜುಳಾ ರಾವ್, ಮಾಜಿ ಮೇಯರ್ ಕವಿತಾ ಸನಿಲ್, ಉದ್ಯಮಿಗಳಾದ ರವೀಂದ್ರ ಶೇಟ್, ಅರ್ಜುನ್ ಭಂಡಾರ್ಕರ್, ಸದಾನಂದ ಪೂಜಾರಿ, ಪ್ರಕಾಶ್ ಕುಮಾರ್, ರೋಹಿತ್ ಸಂಜೀವ್ ಸಾಲ್ಯಾನ್, ರೆಡ್ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತಾರಾಮ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಹಲವಾರು ವರ್ಷಗಳಿಂದ ಅಂಧ ಕಲಾವಿದರಿಗೆ ಆರ್ಥಿಕ ಸಹಾಯ, ಏಡ್ಸ್ ಪೀಡಿತ ಮಕ್ಕಳ ಆಶ್ರಮಕ್ಕೆ ಆರ್ಥಿಕ ಸಹಾಯ, ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಉಚಿತ ಆಯುಷ್ಮಾನ್ ಕಾರ್ಡ್, ಆಧಾರ್ ತಿದ್ದುಪಡಿ ಅಂಚೆ ವಿಮೆ ಕ್ಯಾಂಪ್, ಕಂಕನಾಡಿ ಗರೋಡಿ ಜಾತ್ರೆಯ ಪ್ರಯುಕ್ತ ಗರೋಡಿ ದೇವಸ್ಥಾನದಲ್ಲಿ ಶ್ರಮದಾನ, ಜನಸೇವೆ ಮಾಡುವ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯ, ರಕ್ತದಾನ ಶಿಬಿರಗಳನ್ನು ನಡೆಸುತ್ತಾ ಬಂದಿರುತ್ತೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ವೀಲ್ ಚೇರ್ ಮತ್ತು ವಾಕರ್ ವಿತರಣೆ, ವಿಶೇಷ ಚೇತನ ಮಕ್ಕಳಿಗೆ ಸೈಕ್ಲಿಂಗ್ ಕಿಟ್ ವಿತರಣೆ, ಆಂಬುಲೆನ್ಸ್ ನಡೆಸುವ ಸಂಸ್ಥೆಗಳಿಗೆ ಧನಸಹಾಯ, ಶ್ರವಣ ಯಂತ್ರ, ಅನಾರೋಗ್ಯ ಪೀಡಿತ ಮಕ್ಕಳಿಗೆ ಆರ್ಥಿಕ ಸಹಾಯ ನೀಡಲಿದ್ದೇವೆ. ಕ್ರೀಡೆಯಲ್ಲಿ ಭಾಗವಹಿಸುವ ತಂಡಕ್ಕೆ ಉಚಿತ ಪ್ರವೇಶ ನೀಡಿದ್ದು ಗೆದ್ದ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಒಂದರಿಂದ ನಾಲ್ಕನೇ ಸ್ಥಾನದವರೆಗೆ, ಪುರುಷರ ಹಾಗೂ ಮಹಿಳೆಯರ ವಿಭಾಗಕ್ಕೆ ನೀಡಲಾಗುವುದು ಎಂದರು.
ಇದೇ ದಿನ ವಿಶೇಷವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಮ್ಯಾಚ್ ಇರುವ ಕಾರಣ ಲೈವ್ ಪ್ರದರ್ಶನವನ್ನು ಮಧ್ಯಾಹ್ನ 2.30 ಗಂಟೆಯಿಂದ ದೊಡ್ಡದಾದ ಎಲ್.ಇ.ಡಿ ಪರದೆಯ ಮೂಲಕ ಫ್ಯಾನ್ ಪಾರ್ಕ್ನ ಕಲ್ಪನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಸಂಸದರು, ಶಾಸಕರುಗಳು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಉಮೇಶ್ ಮಲರಾಯಸಾನ, ಸದಾನಂದ ಅಂಚನ್, ದೇವಿಪ್ರಸಾದ್ ಶೆಟ್ಟಿ, ಧೀರೇಶ್ ಕೊಲ್ಯ, ನವನೀತ್ ಕೋಟ್ಯಾನ್, ನಟರಾಜ್ ಪಚ್ಚನಾಡಿ ಮತ್ತಿತರರು ಉಪಸ್ಥಿತರಿದ್ದರು.