
ಸಂತ ಫಿಲೋಮಿನಾದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
Wednesday, April 2, 2025
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಯಕ್ಷಕಲಾ ಕೇಂದ್ರ ಹಾಗೂ ಲಲಿತಕಲಾ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಐಕ್ಯೂಎಸಿ ಸಂಯೋಜಕಿ ಡಾ. ಮಾಲಿನಿ ಕೆ. ಮಾತನಾಡಿ, ‘ರಂಗಭೂಮಿಯಲ್ಲಿ ಸೃಜನಶೀಲತೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ರಂಗಭೂಮಿಯು ನಿರಂತರತೆಯನ್ನು ಹೊಂದಿ ಹೊಸ ಸ್ವರೂಪಗಳಿಗೆ ತೆರೆದಿರಬೇಕಾದ ಅಗತ್ಯತೆಯ ಅವರು ಬಗ್ಗೆ ತಿಳಿಸುತ್ತಾ, ರಂಗಭೂಮಿಯ ಪ್ರಸ್ತುತಿಯನ್ನು ಅನುಭವಿಸುವಂತೆ ವಿದ್ಯಾರ್ಥಿಗಳಿಗೆ ಕರೆಯನ್ನು ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ‘ಕಲೆ ಎಂಬುದು ದೇವರ ಪ್ರಸಾದ ಅದನ್ನು ಬೆಳೆಸಿ ಪೋಷಿಸುವುದೇ ನಾವು ದೇವರಿಗೆ ಅರ್ಪಿಸುವ ನಿಜವಾದ ಪೂಜೆ’ ಎಂದು ತಿಳಿಸಿ, ವಿದ್ಯಾರ್ಥಿಗಳು ವಿವಿಧ ಕಲಾಪ್ರಕಾರಗಳಲ್ಲಿ ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಯಕ್ಷಕಲಾ ಕೇಂದ್ರದ ಸಂಯೋಜಕರು ಮತ್ತು ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಅವರು ಪ್ರಾಸ್ತಾವಿಕವಾಗಿ ನುಡಿಗಳೊಂದಿಗೆ ಸ್ವಾಗತಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರೀದೇವಿ ನಿರೂಪಿಸಿ, ಲಲಿತಕಲಾ ಸಂಘದ ವಿದ್ಯಾರ್ಥಿಗಳಾದ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸುರಭಿ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿ, ಯಕ್ಷಾಮೃತದ ಸಂಯೋಜಕಿ ಸುರಕ್ಷಾ ರೈ ವಂದಿಸಿದರು. ಉಪನ್ಯಾಸಕರಾದ ಡಾ. ಮೈತ್ರಿ ಭಟ್ ಹಾಗೂ ವಿನಿಲ್ ರೋಹನ್ ಡಿ’ಸೋಜಾ ಉಪಸ್ಥಿತರಿದ್ದರು.