ಬಂಟ್ವಾಳದಲ್ಲು ಮಳೆ, ಮನೆ ಕುಸಿತ, ರಸ್ತೆಯಲ್ಲೇ ಹರಿಯುವ ನೀರು

ಬಂಟ್ವಾಳದಲ್ಲು ಮಳೆ, ಮನೆ ಕುಸಿತ, ರಸ್ತೆಯಲ್ಲೇ ಹರಿಯುವ ನೀರು


ಬಂಟ್ವಾಳ: ತಾಲೂಕಿನಾದ್ಯಂತ ಮಂಗಳವಾರ ಮಧ್ಯರಾತ್ರಿಯಿಂದ ಸುರೊಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮನೆ ಕುಸಿತ:

ಪುರಸಭೆ ವ್ಯಾಪ್ತಿಯ ಬಿ. ಕಸಬ ಗ್ರಾಮದ ೩ನೇ ವಾರ್ಡಿನ ಪಲ್ಲಿಕಂಡ ಎಂಬಲ್ಲಿ ಮಾಜಿ ಪುರಸಭೆ ಸದಸ್ಯರಾದ ಬಾಝಿಲ್ ಪಿಂಟೋ ಎಂಬವರ ಮನೆ ಮಂಗಳವಾರ ಬೆಳಗ್ಗೆ ಸುರಿದ ಮಳೆಗೆ ಸಂಪೂರ್ಣ ಕುಸಿದಿದೆ. ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟೊ, ಪುರಸಭೆ ಮುಖ್ಯಾಧಿಕಾರಿ ನಜೀರ್ ಅಹಮದ್ ಮತ್ತು ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರದಿಂದ ಸಿಗುವ ಸಹಾಯಧನವನ್ನು ಕಂದಾಯ ಇಲಾಖೆಯ ಮುಖಾಂತರ ಒದಗಿಸುವ ಭರವಸೆಯನ್ನು ಅಧ್ಯಕ್ಷ ವಾಸು ಪೂಜಾರಿ ನೀಡಿದರು.


ರಸ್ತೆಯಲ್ಲಿಯೇ ಹರಿಯುವ ನೀರು!

ಮಳೆಗಾಲ ಮುನ್ನ ಎಲ್ಲಾ ರಸ್ತೆ ಮತ್ತು ಚರಂಡಿಗಳ ಹೂಳೆತ್ತಿ ಸುಸ್ಥಿತಿಯಲ್ಲಿಡ ಬೇಕಾಗಿರುವುದು ನಗರ, ಸ್ಥಳೀಯಾಡಳಿತ ಸಂಸ್ಥೆಗಳ ಕರ್ತವ್ಯ. ಅದೇರೀತಿ ಹೆದ್ದಾರಿಗಳ ಚರಂಡಿಯನ್ನೂ ಸರಾಗವಾಗಿ ನೀರು ಹರಿದು ಹೋಗಲು ಅನುವು ಮಾಡಿಕೊಡ ಬೇಕಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಾಡಳಿತ ಕೂಡ ಸಜ್ಜಾಗಬೇಕಿದೆ.

ಮಳೆ, ವಿಪತ್ತು ಮುಂಜಾಗೃತಾಕ್ರಮವಾಗಿ ತಾಲೂಕಾಡಳಿತ ಅಧಿಕಾರಿಗಳ ಸಭೆನಡೆಸಿ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಯ ಮುಖ್ಯಸ್ಥರು, ತಾಲೂಕುಮಟ್ಟದ ಅಧಿಕಾರಿಗಳಿಗೆ ನಿರ್ದೇಶನವೇನೋ ನೀಡಿದ್ದಾರೆ. ಆದರೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಈ ಆದೇಶ ಪಾಲನೆಯಾಗಿಲ್ಲ ಎಂಬುದು ಮಂಗಳವಾರ ಸುರಿದ ಮುಂಗಾರು ಪೂರ್ವ ಮಳೆಗೆ ಬಟಾಬಯಲಾಗಿದೆ. ಕಾಟಾಚಾರಕ್ಕೆಂಬಂತೆ ಮುಂಜಾಗೃತಾ ಸಭೆ ನಡೆಸುವುದು ಬಿಟ್ಟರೆ,ಅಧಿಕಾರಿಗಳ ಕಾರ್ಯವೈಖರಿ ಮಳೆ ಸುರಿದು ಅವಾಂತರ ಸೃಷ್ಠಿಯಾದಾಗಲೇ ಅರಿವಿಗೆ ಬರುತ್ತದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಒಂದೆರಡು ಕಡೆಗಳಲ್ಲಿ ಚರಂಡಿಯ ಹೊಳೆತ್ತಿದ್ದರೆ, ಹೆಚ್ಚಿನ ಭಾಗದಲ್ಲಿ ಹೂಳೆತ್ತದ್ದರಿಂದ ಮಳೆ ನೀರು ಚರಂಡಿ ಬಿಟ್ಟು ರಸ್ತೆಯಲ್ಲೇ ಹರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಡ ಸಮರ್ಪಕವಾದ ಚರಂಡಿ ವ್ಯವಸ್ಥೆ ಇದ್ದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ.

ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿ ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗವಾದ ಲೊರೆಟ್ಟೊದಿಂದ ಸಂಗಬೆಟ್ಟುವರೆಗೆ ಅಮ್ಟಾಡಿ, ರಾಯಿ, ಕುಕ್ಕಿಪಾಡಿ, ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಹಲವಾರು ಗ್ರಾಮಗಳನ್ನು ಹಾದು ಹೋಗುತ್ತದೆ.ಕಾಲ ಕಾಲಕ್ಕೆ ಹೆದ್ದಾರಿ ಅಭಿವೃದ್ಧಿಗೊಳ್ಳುತ್ತಿದ್ದು, ರಸ್ತೆ ಚರಂಡಿಗಳಿಗೂ ಕಾಯಕಲ್ಪವಾಗುತ್ತದೆ. ಸಂಗಬೆಟ್ಟುವಿನಿಂದ ಮಾಡಮೆವರೆಗೆ ಕಳೆದ ಬಾರಿ ರಸ್ತೆ ಅಭಿವೃದ್ಧಿಗೊಂಡು ರಸ್ತೆ ಬದಿ ಚರಂಡಿಯೂ ನಿರ್ಮಾಣವಾಗಿತ್ತು. ಆದರೆ ಮತ್ತೆ ಚರಂಡಿಯಲ್ಲಿ ಹೂಳು ತುಂಬಿ, ರಸ್ತೆ ಬದಿ ಗಿಡ ಗಂಟಿಗಳು ಬೆಳೆದಿದೆ. ಇಲ್ಲಿ ಪ್ರತೀ ಮಳೆಗಾಲದಲ್ಲೂ ಸರಿಯಾದ ಚರಂಡಿ ಇಲ್ಲದೆ ರಸ್ತೆಯಲ್ಲಿ ಮತ್ತು ರಸ್ತೆ ಬದಿ ಕಟ್ಟಡಗಳಿಗೆ ನೀರು ಹರಿಯುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.

ಸಿದ್ದಕಟ್ಟೆ, ಮಾಡಮೆಯಿಂದ ಸೊರ್ನಾಡುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿ ರಸ್ತೆ ಅಗಲಗೊಳಿಸಲಾಗಿದೆಯಾದರೂ ಚರಂಡಿ ವ್ಯವಸ್ಥೆ ಇಲ್ಲ. ರಾಯಿ ಬಾರ್ಜಾರ್ ಎಂಬಲ್ಲಿ ಚರಂಡಿ ನಿರ್ಮಿಸಲು ಸ್ಥಳವೇ ಇಲ್ಲ. ಮಳೆ ಬಂದರೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಅಣ್ಣಳಿಕೆ ಜಂಕ್ಷನ್‌ನಲ್ಲಿ ರಸ್ತೆ ಡಾಮರು ಎದ್ದುಹೋಗಿ ಹೊಂಡ ಗುಂಡಿ ಉಂಟಾಗಿದೆ.ಇಲ್ಲಿ ರಸ್ತೆ ಚರಂಡಿ ಇಲ್ಲದೆ ಈಗ ಬರುತ್ತಿರುವ ಮಳೆ ನೀರು ರಸ್ತೆ ಬದಿ ತುಂಬಿಕೊಂಡಿದೆ. ರಸ್ತೆ ಅಗಲೀಕರಣಕ್ಕೆ ಮಣ್ಣು ಅಗೆದಿರುವುದರಿಂದ ರಸ್ತೆ ಬದಿ ಪಾದಾಚಾರಿಗಳು ನಡೆದಾಡಲೂ ಕಷ್ಟವಾಗಿದೆ. ದ್ವಿಚಕ್ರ ವಾಹನಗಳು ಜಾರಿ ಬೀಳುವ ಅಪಾಯವಿದೆ.

ಸೊರ್ನಾಡು, ಅಣ್ಣಳಿಕೆ, ಕೊಯಿಲ ಭಾಗದ ರಸ್ತೆ ಬದಿ ಇನ್ನೂ ಚರಂಡಿಗಳ ದುರಸ್ತಿ ನಡೆದಿಲ್ಲ. ರಸ್ತೆ ಬದಿ ಚರಂಡಿಗಳಲ್ಲಿ ಮಣ್ಣು, ಹೂಳು, ಕಸ ಕಡ್ಡಿ ತುಂಬಿ  ಚರಂಡಿಯೇ ಕಾಣದಾಗಿದೆ. ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲೇ ಕಾಂಕ್ರೇಟ್ ಚರಂಡಿ ನಿರ್ಮಿಸಿದರೆ ಮಳೆ ನೀರು ಇದರಲ್ಲೇ ಹರಿದುಹೋಗುತ್ತದಲ್ಲದೆ ರಸ್ತೆಯು ಒಂದಷ್ಟು ಬಾಳಿಕೆ ಬರಲಿದೆ. ರಸ್ತೆ ಅಭಿವೃದ್ಧಿ ಪಡಿಸುವ ವೇಳೆ ಚರಂಡಿ ನಿರ್ಮಿಸದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ನಿಲುಗಡೆಯಾಗುವ ಪರಿಣಾಮ ರಸ್ತೆ ಕೂಡ ನಿಗದಿತ ಅವಧಿಗೆ ಮೊದಲೇ ಕೆಟ್ಟುಹೋಗುತ್ತದೆ.ಈ ಬಗ್ಗೆ ಸ್ಥಳೀಯಾಡಳಿತ ಅಥವಾ ಹೆದ್ದಾರಿ ಇಲಾಖೆ ಗಮನ ಹರಿಸಬೇಕಾಗಿದೆ.

ಕಲ್ಲಡ್ಕ ಕೆಸರಿನಿಂದ ಮುಕ್ತಿ:

ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ಕಲ್ಲಡ್ಕದಲ್ಲಿ ಪ್ರತಿಮಳೆಗೆ ಕೆಸರುಮಯವಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರು ಪಡುತ್ತಿದ್ದ ಪಾಡು ದೇವರಿಗೆ ಪ್ರೀತಿಯಾಗಿತ್ತು. ಈ ಬಾರಿ ಕಲ್ಲಡ್ಕದಲ್ಲಿ ಮೇಲ್ಸ್ ತುವೆ ಅಳವಡಿಸಿದ್ದಲ್ಲದೆ, ಸರ್ವಿಸ್ ರಸ್ತೆಯನ್ನು ಡಾಮಾರೀಕರಣ ಗೊಳಿಸಿದರಿಂದಾಗಿ ಕೆಸರು ಮುಕ್ತವಾಗಿದೆ. ನರಹರಿ ಭಾಗದಲ್ಲಿ ರಸ್ತೆ ವಿನ್ಯಾಸದಲ್ಲಿ ಬದಲಾವಣೆಯಾದುದರಿಂದ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಯಿಂದ ಒಂದಷ್ಟು ವಾಹನ ಹಾಗೂ ಸಾರ್ವಜನಿಕರ ಅಡಚಣೆ ಉಂಟಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಕಲ್ಲಡ್ಕ ಮೇಲ್ಸ್‌ತುವೆಯ ಮೂಲಕ ವಾಹನಗಳ ಅಧಿಕೃತ ಸಂಚಾರಕ್ಕೆ ಸಾಧ್ಯತೆ ಎಂದು ಹೇಳಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article