ಪ್ರಾಕೃತಿಕ ವಿಕೋಪ ತಡೆಯಲು ಇಲಾಖಾಧಿಕಾರಿಗಳು ಸನ್ನದ್ಧರಾಗಿ: ವಿವಿಧ ಅಧಿಕಾರಿಗಳಿಗೆ ಶಾಸಕ ಕೋಟ್ಯಾನ್ ಸೂಚನೆ

ಪ್ರಾಕೃತಿಕ ವಿಕೋಪ ತಡೆಯಲು ಇಲಾಖಾಧಿಕಾರಿಗಳು ಸನ್ನದ್ಧರಾಗಿ: ವಿವಿಧ ಅಧಿಕಾರಿಗಳಿಗೆ ಶಾಸಕ ಕೋಟ್ಯಾನ್ ಸೂಚನೆ


ಮೂಡುಬಿದಿರೆ: ಶಾಲೆ, ಸಾರ್ವಜನಿಕ ಓಡಾಡುವ ಸ್ಥಳ, ರಸ್ತೆ ಬದಿಯಲ್ಲಿ  ಅಪಾಯಕಾರಿ ಮರ, ಕೊಂಬೆಗಳಿದ್ದಲ್ಲಿ ತೆರವುಗೊಳಿಸಬೇಕು, ವಾಲಿದ ವಿದ್ಯುತ್ ಕಂಬಗಳು, ಜೋತುಬಿದ್ದ ತಂತಿಗಳಿದ್ದಲ್ಲಿ ಸರಿಪಡಿಸಬೇಕು, ಚರಂಡಿ- ರಾಜಕಾಲುವೆಗಳ ಹೂಳೆತ್ತಿ ಮಳೆ ನೀರು ಸರಾಗವಾಗಿ  ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು ಈ ಎಲ್ಲಾ ಕೆಲಸಗಳು 10 ದಿನಗಳೊಳಗಾಗಿ ನಡೆಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. 


ಅವರು ಪ್ರಾಕೃತಿಕ ವಿಕೋಪ ತಡೆ ಮುನ್ನೆಚ್ಚರಿಕೆ ಕುರಿತು ಮಂಗಳವಾರ ತಹಶಿಲ್ದಾರ್ ಕಚೇರಿಯಲ್ಲಿ  ನಡೆದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖಾಧಿಕಾರಿಗಳ  ಸಭೆಯಲ್ಲಿ  ಮಾತನಾಡಿದರು.


ಅವರು ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ಇಲಾಖಾಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಮೆಸ್ಕಾಂ ಮತ್ತು ಅರಣ್ಯ ಇಲಾಖೆಗಳಿಗೆ ಹೆಚ್ಚಿನ ಜವಬ್ದಾರಿ ಇದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಅದರಿಂದ ಅನಾಹುತಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನನ್ನಾಗಿ ಮಾಡಲಾಗುವುದು ಎಂದು ಕೋಟ್ಯಾನ್ ಎಚ್ಚರಿಸಿದರು. 


ನಿಮ್ಮ ಕೆಲಸಗಳಿಗೆ ಇನ್ನೊಂದು ಇಲಾಖೆಯಿಂದ ಅಥವಾ ಮೇಲಾಧಿಕಾರಿಗಳಿಂದ ಸಹಕಾರ ಸಿಗದಿದ್ದಲ್ಲಿ ನೇರವಾಗಿ ನನಗೆ ತಿಳಿಸಿ ಅವರ ಜತೆ ನಾನು ಮಾತನಾಡುತ್ತೇನೆ ಎಂದರು. 


ಇಲಾಖೆಗಳ ಕಾಯ೯ ಪ್ರಗತಿಯನ್ನು ಪರಿಶೀಲಿಸಲು ಎರಡು ವಾರದ ನಂತರ ಇನ್ನೊಂದು ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು.

12 ಶಾಲೆಗಳ ಬಳಿ ವಿದ್ಯುತ್ ತಂತಿಗಳು ಹಾದು ಹೋಗಿವೆ, ಮರಗಳ ಕೊಂಬೆಗಳು ಬಾಗಿವೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದ್ದೇವೆ ಎಂದು ತಾಲೂಕು ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಶಾಸಕರ ಗಮನಕ್ಕೆ ತಂದರು.

ತೆಂಕಮಿಜಾರು ಪಿಡಿಓ ರೋಹಿಣಿ ಅವರು ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಯವರು ತೋಡಾರು ಬಳಿ ರಸ್ತೆಯನ್ನು ಎತ್ತರ ಮಾಡಿದ್ದು ಇದರಿಂದಾಗಿ ಮಳೆ ನೀರು ಪಕ್ಕದಲ್ಲಿರುವ ಮನೆಗಳಿಗೆ ಹರಿದು ಹೋಗುತ್ತಿದೆ ಇದರಿಂದಾಗಿ ಸಮಸ್ಯೆಯಾಗಿದ್ದು ಮನೆಯವರು ನಮಗೆ ಕರೆ ಮಾಡುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು. ಮಳೆ ನೀರು ಮನೆಗಳಿಗೆ ಹೋಗದಂತೆ ಸರಿಯಾದ ವ್ಯವಸ್ಥೆಯನ್ನು ಮಾಡುವಂತೆ ರಾ.ಹೆ. ಇಲಾಖಾಧಿಕಾರಿಗಳಿಗೆ ಕೋಟ್ಯಾನ್ ಅವರು ತಿಳಿಸಿದರು. 

ಇರುವೈಲು ದಂಬೆದ ಕೋಡಿ ಪಿಡಬ್ಲ್ಯುಡಿ ರಸ್ತೆಯನ್ನು ದುರಸ್ಥಿ ಮಾಡುವಂತೆ ಗ್ರಾಮಸಭೆಯಲ್ಲಿ ಮನವಿ ಮಾಡಿದ್ದರೂ ಈವರೆಗೆ ದುರಸ್ಥಿಯಾಗಿಲ್ಲವೆಂದು ಇರುವೈಲು ಗ್ರಾ.ಪಂ. ಪಿಡಿಓ ಶೇಖರ್ ಗಮನಕ್ಕೆ ತಂದರು. ಆದಷ್ಟು ಬೇಗನೇ ದುರಸ್ಥಿಗೊಳಿಸುವಂತೆ  ಇಲಾಖೆಯ ಅಧಿಕಾರಿಗೆ ಶಾಸಕರು ಸೂಚಿಸಿದರು. 

ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಮಾತನಾಡಿ, ಮಳೆಗಾಲಕ್ಕೆ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಸೂಚನೆಗಳನ್ನು ನೀಡಿದರೂ ಕೆಲವು ಅಧಿಕಾರಿಗಳು ಸ್ಪಂದನೆ ತೋರದಿರುವುದು ಬೇಸರದ ಸಂಗತಿ. ಪ್ರಾಕೃತಿಕ ವಿಕೋಪದ ಸಂದರ್ಭ ಜೀವ ಹಾನಿ ಅಥವಾ, ಅನಾಹುತ ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಅಗತ್ಯ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅನಾಹುತ ಸಂಭವಿಸಿದ್ದೆ ಆದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ತಾಲೂಕು ಪಂಚಾಯತ್ ಕಾಯ೯ನಿರ್ವಹಣಾಧಿಕಾರಿ ಕುಸುಮಾಧರ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಹಾಗೂ  ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article