
ಅಕ್ಕರಂಗಡಿಯಲ್ಲಿ ಪೈಂಟರ್ ಕೊಲೆಗೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬಂಟ್ವಾಳ: ಕೆಲದಿನಗಳ ಹಿಂದೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ ತಂಗುದಾಣದಲ್ಲಿ ನಿಂತಿದ್ದ ಪೈಂಟರ್ ಅಮ್ಮಿ ಯಾನೆ ಹಮೀದ್ ಎಂಬವನ್ನು ಬೈಕ್ನಲ್ಲಿ ಬಂದ ಮುಸುಕುಧಾರಿಗಳು ತಲವಾರು ದಾಳಿಗೈದು ಕೊಲೆಗೆಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಉಳ್ಳಂಜೆ ನೌಷದ್, ಕೈಕಂಬ ನಿವಾಸಿ ನವಾಜ್ ಯಾನೆ ಬೀಡಿ ನವಾಜ್, ಪಾಣೆಮಂಗಳೂರಿನ ನೆಹರುನಗರ ನಿವಾಸಿಗಳಾದ ಮೇಹರೂಪ್ ಮತ್ತು ರಿಝ್ವಾನ್ ಬಂಧಿತ ಅರೋಪಿಗಳಾಗಿದ್ದಾರೆ. ಸದ್ಯ ಈ ಪ್ರಕರಣದ ಪ್ರಮುಖ ಆರೋಪಿಯೆನ್ನಲಾದ ಹ್ಯಾರೀಸ್ ಇನ್ನು ಬಂಧನವಾಗಬೇಕಾಗಿದೆ.
ಡಿವೈಎಸ್ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆಯ ಇನ್ಸ್ಪೆಕ್ಟರ್ ಆನಂತಪದ್ಮನಾಭ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ಗಳಾದ ನಂದಕುಮಾರ್, ರಾಮಕೃಷ್ಣ, ಮಂಜುನಾಥ್ ಮತ್ತವರ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಏ.16 ರಂದು ಮಧ್ಯರಾತ್ರಿ ಪಾಣೆಮಂಗಳೂರಿನ ನೆಹರು ನಗರದಲ್ಲಿ ಅಂಗಡಿ ಮುಚ್ಚುತ್ತಿದ್ದ ವೇಳೆ ತಸ್ಲೀಂ ಎಂಬವರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರು. ತಸ್ಲೀಂ ಮತ್ತು ಹಮೀದ್ ಸ್ನೇಹಿತರಾಗಿದ್ದು, ತಸ್ಲೀಂ ಮೇಲಿನ ತಲವಾರ ದಾಳಿಗೆ ಸಂಬಂಧಿಸಿ ತಿಂಗಳಾದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ಹಮೀದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದು ಹಾಕಿದ್ದರು. ಇದು ಸಖತ್ ವೈರಲ್ ಕೂಡ ಆಗಿತ್ತೆನ್ನಲಾಗಿದ್ದು, ಇದೇ ವಿಚಾರವಾಗಿ ಆರೋಪಿಗಳು ಹಮೀದ್ ಕೊಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.