
ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಚಚೆ೯
ಮೂಡುಬಿದಿರೆ: ಪುರಸಭಾ ವ್ಯಾಪ್ತಿಗೆ ನೀರು ನೀಡುವ ಪುಚ್ಚೆಮೊಗರು ಡ್ಯಾಂನಿಂದ ಬರುವ ನೀರಿನಲ್ಲಿ ಕಳೆದ 10 ದಿನಗಳಿಂದ ವ್ಯತ್ಯಯವಾಗಿರುವುದರಿಂದ ಪುರಸಭೆಯನ್ನು ಅವಲಂಭಿತವಾಗಿರುವ ಸುಮಾರು 2500ಕ್ಕೂ ಅಧಿಕ ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುರುವಾರ ನಡೆದ ಮಳೆೆಗಾಲದ ಮೊದಲ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚಚೆ೯ ನಡೆಸಿದರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ ಅವರ ಅಧ್ಯಕ್ಷತೆಯಲ್ಲಿ ಪುರಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಸುರೇಶ್ ಪ್ರಭು ಅವರು ಪುಚ್ಚೆಮೊಗರು ಡ್ಯಾಂ ನೀರು ಸರಬರಾಜು ಹಾಗೂ ಪುರಸಭೆ ವ್ಯಾಪ್ತಿಯ ಜನರು ಅನುಭವಿಸುತ್ತಿರುವ ತೊಂದರೆಯ ಕುರಿತು ಅವರು ಪ್ರಾಸ್ತಾಪಿಸಿದರು.
ಮಳೆ ಬರುವ ಸಂದರ್ಭದಲ್ಲಿ ಡ್ಯಾಂ ಗೇಟ್ ತೆರೆಯುವುದು ಸ್ವಲ್ಪ ತಡವಾಗಿರುವುದರಿಂದ ಸರಬರಾಜು ಆಗುವ ಜಾಕ್ವೆಲ್ ಮರಳು, ಕಸಕಡ್ಡಿಗಳಿಂದಾಗಿ ಬ್ಲಾಕ್ ಆಗಿದೆ. ಕಳೆದ ಎರಡು ದಿನಗಳಿಂದ ಅದನ್ನು ಸರಿಪಡಿಸುವ ಕೆಲಸವಾಗುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಮುಖ್ಯಾಧಿಕಾರಿ ಇಂದು.ಎಂ ತಿಳಿಸಿದರು. ಅತೀ ಅಗತ್ಯವಿರುವ ಕುಟುಂಬಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಿ ಎಂದು ಹಿರಿಯ ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು.
ವಾಡ್೯ನಲ್ಲಿರುವ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ ನವೆಂಬರ್ ತಿಂಗಳಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಉಪಾಧ್ಯಕ್ಷರು 23 ವಾಡ್೯ಗಳಿಗೆ ತಲಾ ರೂ 10 ಲಕ್ಷ ಘೋಷಣೆ ಮಾಡಿದರು. ಆದರೆ ಮಳೆಗಾಲ ಬರುತ್ತಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಇನ್ನು ಡಿಸೆಂಬರ್ ತಿಂಗಳ ನಂತರವೇ ರಸ್ತೆಗಳಿಗೆ ಡಾಂಬರು ಅಳವಡಿಸಬಹುದು. ಆದರೆ ಅಕ್ಟೋಬರ್ ತಿಂಗಳಲ್ಲಿ ಆಡಳಿತದ ಅವಧಿ ಮುಗಿಯುವುದರಿಂದ ಅನುದಾನ ಘೋಷಣೆ ಬಾಕಿ ಉಳಿದು, ಯಾವುದೇ ಪ್ರಯೋಜನವಾಗದಂತಿದೆ ಎಂದು ಸದಸ್ಯ ಸುರೇಶ್ ಪ್ರಭು ತಿಳಿಸಿದರು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಪ್ರಸ್ತಾವನೆ ಬಾಕಿ ಉಳಿದಿದೆ ಎಂದು ಇಂಜಿನಿಯರ್ ನಳಿನ್ ಕುಮಾರ್ ಪಿ. ಸಭೆಯಲ್ಲಿ ತಿಳಿಸಿದರು.
ಜೈನ ಪೇಟೆಯ ಕಲ್ಸಂಕದಲ್ಲಿ ತೋಡಿಗೆ ತಡೆಗೋಡೆ ಆಗಬೇಕೆಂದು ಕಳೆದ ಸಭೆಯಲ್ಲೇ ಪ್ರಸ್ತಾಪಿಸಿದ್ದೆ ಸ್ಥಳ ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದು ಬಿಟ್ಟರೆ ಯಾವುದೇ ಬೆಳವಣಿಗೆ ಆಗಿಲ್ಲ. ಬಡಗಬಸದಿ ಬಳಿಯ ಕಾಮಗಾರಿಯ ಜೊತೆಗೆ ಇದನ್ನು ಪೂರ್ಣಗೊಳಿಸಿ ಎಂದು ಸದಸ್ಯೆ ಶ್ವೇತಾ ಜೈನ್ ತಿಳಿಸಿದರು.
ಕಸ ಬಿಸಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿವಿಧ ಕಡೆಗಳಲ್ಲಿ 14 ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಅದನ್ನು ಪುರಸಭೆ ಕಾರ್ಯಾಲಯದಲ್ಲೇ ವೀಕ್ಷಣೆ ಮಾಡುತ್ತೇವೆ. ಕಸ ಬಿಸಾಡುವವರಿಗೆ ಕಾರ್ಯಾಚರಣೆಯ ಸಂದರ್ಭ ರೂ.5 ಸಾವಿರ ದಂಢ ವಿಧಿಸುತ್ತೇವೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಕಳೆದ ತಿಂಗಳು ಕೆಲವು ಕಡೆ ಕಾರ್ಯಾಚರಣೆ ಮಾಡಿ, ದಂಡ ವಸೂಲಿ ಮಾಡುತ್ತಿರುವಾಗ ಪುರಸಭೆ ಸದಸ್ಯರು ಒತ್ತಡ ಹೇರಿದ್ದಾರೆ. ಕಾರ್ಯಾಚರಣೆ ಸಂದರ್ಭ ಪ್ರಭಾವ, ಒತ್ತಡ ಹೇರಬೇಡಿ ಎಂದು ಆರೋಗ್ಯ ನಿರೀಕ್ಷಕಿ ಶಶಿರೇಖಾ ವಿನಂತಿಸಿದರು. ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೆಚ್ಚಿನ ಸದಸ್ಯರು ಸಭೆಯಲ್ಲಿ ತಿಳಿಸಿದರು. ದಂಢ ವಸೂಲಾತಿ ಪ್ರಥಮ ಹಂತದಲ್ಲಿ ರೂ.1000 ದಂಢವನ್ನು ನಿಗಧಿಪಡಿಸಿ, ಮುಂದೆ ಅದು ಪುನಾರರ್ವತೆಯಾದಲ್ಲಿ ಹೆಚ್ಚಿನ ಮೊತ್ತವನ್ನು ದಂಢ ವಿಧಿಸಬಹುದು ಎಂದು ಸದಸ್ಯ ಪಿ.ಕೆ ಥೋಮಸ್ ಸಲಹೆಯಿತ್ತರು.
ಜಲಜೀವನ್ ಮಿಷನ್ಗೆ ಸಂಬಂಧಪಟ್ಟಂತೆ ಹೊಂಡಗಳನ್ನು ತೆಗೆದಿದ್ದಾರೆ. ಕೆಲವು ಕಡೆ ಅಪೂರ್ಣ ಕಾಮಗಾರಿಗಳಾಗಿದ್ದು, ಮಳೆಗಾಲದಲ್ಲಿ ತೊಂದರೆಯಾಗಲಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒಂದು ಸಭೆಗೆ ಹಾಜರಾಗಿದ್ದಾರೆ ಬಿಟ್ಟು ಸಮಾಲೋಚನೆ ಮಾಡಿದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸದಸ್ಯರು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪ್ರಸಾದ್ ಕುಮಾರ್, ರಾಜೇಶ್ ನಾಯ್ಕ್ ಮಮತಾ ಆನಂದ್, ಶಕುಂತಳಾ ದೇವಾಡಿಗ, ರೂಪಾ ಎಸ್.ಶೆಟ್ಟಿ, ಪುರಂದರ ದೇವಾಡಿಗ, ವರುಣ್, ಕೊರಗಪ್ಪ, ಹಿಮಾಯತ್, ಇಕ್ಬಾಲ್ ಕರೀಂ, ಸೌಮ್ಯ ಸಂದೀಪ್, ದಿವ್ಯಾ ಜಗದೀಶ್ ಚರ್ಚೆಯಲ್ಲಿ ಪಾಲ್ಗೊಂಡರು.
ಪರಿಸರ ಅಭಿಯಂತರೆ ಶಿಲ್ಪಾ ಎಸ್., ಕಂದಾಯ ಅಧಿಕಾರಿ ಜ್ಯೋತಿ ಎಚ್., ಕಚೇರಿ ವ್ಯವಸ್ಥಾಪಕಿ ಯಶಸ್ವಿನಿ, ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ಸಭೆಯಲ್ಲಿ ಪಾಲ್ಗೊಂಡಿದ್ದರು.