
ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಶಿಬಿರ
Wednesday, May 21, 2025
ಮಂಗಳೂರು: ಮಂಗಳೂರಿನ ಶಕ್ತಿನಗರ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ 3 ದಿನಗಳ ಶಿಕ್ಷಕರ ತರಬೇತಿ ಶಿಬಿರವು ಬುಧವಾರದಂದು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಉದ್ಘಾಟಣೆಗೊಂಡಿತು.
ಕಾರ್ಯಕ್ರಮವನ್ನು ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಜೀತ್ ನಾಕ್ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಶಿಕ್ಷಕರ ನಿರಂತರ ಬೆಳವಣಿಗೆಗೆ ಇಂತಹ ತರಬೇತಿಗಳು ಅವಶ್ಯಕ ಎಲ್ಲಾ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಾರೆ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ರಂಗ ಭೂಮಿ ಕಲಾವಿದರು ಮತ್ತು ಸಂಗೀತ ಶಿಕ್ಷಣ ತಜ್ಞರು ಆಗಿರುವ ಲೋಕನಾತ್ ವಿ. ರೆಡ್ಡಿ ಮತ್ತು ರಚನಾತ್ಮಕ ನಾಟಕ ತರಬೇತಿದಾರರು ಮತ್ತು ಗಣಿತ ಉಪನ್ಯಾಸಕಿ ಆಗಿರುವ ದೀಪ್ತಿ ಎನ್.ಟಿ. ಅವರು ತಮ್ಮ ಕಲಿಕಾ ಅನುಭವವನ್ನು ಕಲಿಕೆ ಮತ್ತು ಕಲೆಗಳ ಸಂಯೋಜನೆಯ ಮೂಲಕ ಮಕ್ಕಳಿಗೆ ಕಲಿಸುವ ರೀತಿಯನ್ನು ಶಿಕ್ಷಕರಿಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮತ್ತು ಶಕ್ತಿ ರೆಸಿಡೆನ್ಯಿಯಲ್ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್ರವರು ಉಪಸ್ಥಿತರಿದ್ದರು.
ಈ ತರಬೇತಿ ಶಿಬಿರದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 50ಕ್ಕೂ ಅಧಿಕ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದರು. ಈ ಕಾರ್ಯಕ್ರಮ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಉತ್ತೇಜನಕಾರಿ ಹಾಗೂ ಅರ್ಥಪೂರ್ಣ ವೇದಿಕೆಯಾಗಿ ಪರಿಣಮಿಸಿತು.