
ಮಾರಕಾಸ್ತ್ರದಿಂದ ಇರಿದು ಕೊಲೆ
ಮಂಗಳೂರು: ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆಗೈದ ಘಟನೆ ಗುರುವಾರ ರಾತ್ರಿ ನಗರದ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಪಿಲಿಕುಳ ಸಮೀಪದ ಎದುರುಪದವು ನಿವಾಸಿ ಸುಲೈಮಾನ್ (50) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ವಳಚ್ಚಿಲ್ ನಿವಾಸಿ ಮುಸ್ತಫಾ (30) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಸಮಸ್ಯೆಯೊಂದರ ಬಗ್ಗೆ ಮಾತುಕತೆ ನಡೆಸಲು ಸುಲೈಮಾನ್ ಅತನ್ನ ಇಬ್ಬರು ಮಕ್ಕಳಾದ ಶಿಹಾಬ್ ಮತ್ತು ರಿಹಾಬ್ ಜೊತೆಗೂಡಿ ವಳಚ್ಚಿಲ್ ಪದವಿನ ಮನೆಗೆ ಗುರುವಾರ ರಾತ್ರಿ ತೆರಳಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆರೋಪಿ ಮುಸ್ತಫಾ ಚೂರಿಯಿಂದ ಸುಲೈಮಾನ್ ಮತ್ತು ಅವರ ಇಬ್ಬರು ಮಕ್ಕಳಿಗೆ ಇರಿದು ಗಾಯಗೊಳಿಸಿದ್ದಾನೆ. ಗಂಭೀರ ಗಾಯಗೊಂಡ ಸುಲೈಮಾನ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.
ಶಿಹಾಬ್ನ ಎದೆಗೆ ಹಾಗೂ ರಿಹಾಬ್ ನ ಕೈಗೆ ಗಾಯಗಳಾಗಿದ್ದು, ಪಡೀಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಹಾಬ್ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.