
ಅಭಿವೃದ್ಧಿಯಲ್ಲಿ ಸರಕಾರದಿಂದ ದ.ಕ. ಜಿಲ್ಲೆಯ ನಿರ್ಲಕ್ಷ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
ಬಂಟ್ವಾಳ: ಕರ್ನಾಟಕ ಸರಕಾರಕ್ಕೆ ದ.ಕ. ಜಿಲ್ಲೆ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದರೂ, ಅಭಿವೃದ್ಧಿ ಕಾರ್ಯದಲ್ಲಿ ಮಾತ್ರ ದ.ಕ. ಜಿಲ್ಲೆಯನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಟೀಕಾಪ್ರಹಾರಗೈದರು.
ಸೋಮವಾರ ಬಿಜೆಪಿ ಬಂಟ್ವಾಳ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಪುರಸಭಾ ಅವರಣದಲ್ಲಿ ಕರ್ನಾಟಕ ಸರಕಾರದ ಜನವಿರೋಧಿ ಮತ್ತು ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ತೆರಿಗೆ ನಮ್ಮ ಹಕ್ಕಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಚಿಕ್ಕಾಸು ಅನುದಾನವನ್ನು ನೀಡಿಲ್ಲ, ಜಿಲ್ಲೆಯ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರವಾಗಲಿ, ಜಿಲ್ಲಾ ಉಸ್ತುವಾರ ಸಚಿವರಾಗಲಿ ಬಿಜೆಪಿ ಶಾಸಕರನ್ನು ಕರೆದು ಚರ್ಚಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು ಸರಕಾರ ಎಲ್ಲಾ ವಿಚಾರದಲ್ಲೂ ಜಿಲ್ಲೆಯನ್ನು ಕಡೆಗಣಿಸಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬ್ರಹ್ಮಾಂಡ ಭ್ರಷ್ಟಾಚಾರ, ಹಗರಣಗಳಲ್ಲೇ ಮುಳುಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ಸಿ.ಎಂ. ಆಪ್ತರಾದ ಬಿ.ಆರ್.ಪಾಟೀಲರಂತಹ ಕಾಂಗ್ರೆಸ್ ಶಾಸಕರೇ ವಸತಿ ಯೋಜನೆಯಲ್ಲಿ ಕಾಸು ಕೊಟ್ಟರೇ ಮಾತ್ರ ಜನಸಾಮಾನ್ಯರಿಗೆ ಮನೆ ಎಂಬ ಸತ್ಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಎಂದರು.
ಜಿಲ್ಲೆಯನ್ನು ಕಾಡುತ್ತಿರುವ 9/11, ಕೆಂಪುಕಲ್ಲು, ಮರಳು ಸಹಿತ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದ ಅವರು, ಭ್ರಷ್ಟ, ಜನವಿರೋಧಿ ಸರಕಾರ ತೊಲಗುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದರು.
ಮಾಜಿ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಅವರು ಮಾತನಾಡಿ, ದುರಂಹಕಾರಿ, ನಾವೇ ನಡೆದದ್ದೇ ದಾರಿ ಎಂಬ ವರ್ತನೆಯ ಸಿ.ಎಂ, ಡಿಸಿಎಂ ಅವರನ್ನು ಇದುವರೆಗೂ ರಾಜ್ಯದ ಜನತೆ ಕಂಡಿಲ್ಲ, ಇವರಿಬ್ಬರ ಮಧ್ಯೆ ತಾಳ-ಮೇಳವಿಲ್ಲದೆ ಆರ್ಸಿಬಿ ವಿಜಯೋತ್ಸವದ ವೇಳೆ 11 ಮಂದಿ ಬಲಿಯಾಗಬೇಕಾಯಿತು. ಇದರ ಹೊಣೆಯನ್ನು ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟಿ ಜವಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆರೋಪಿಸಿದರು.
ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ಮೇ ತಿಂಗಳ ವೇತನವನ್ನು ನೀಡಲು ಸಾಧ್ಯವಾಗದಿದ್ದು, ಅವರು ಬೀದಿಗೆ ಬರುವ ಸಾಧ್ಯತೆ ಇದೆ. ಅತಿಯಾದ ಮುಸ್ಲೀಂ ಒಲೈಕೆ ರಾಜಕಾರಣದಿಂದ ಹಿಂದೂ ಸಮಾಜವನ್ನು ಹತ್ತಿಕ್ಕುವ ಕಾರ್ಯದಲ್ಲಿ ಸರಕಾರ ನಿರತವಾಗಿದೆ ಎಂದು ಟೀಕಿಸಿದರು.
ಬಳಿಕ ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಕುಲಾಲ್ ಅವರ ನೇತೃತ್ವದಲ್ಲಿ ಮುಖ್ಯಾಧಿಕಾರಿ ನಝೀರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ, ಪುರಸಭಾ ಸದಸ್ಯರಾದ ಎ. ಗೋವಿಂದಪ್ರಭು, ಜಯರಾಮ ನಾಯ್ಕ, ದೇವಕಿ, ಶಶಿಕಲಾ, ವಿದ್ಯಾವತಿ ಪ್ರಮೋದ್, ರೇಖಾ ಪೈ,ಮೀನಾಕ್ಷಿಗೌಡ, ಜಯಂತಿ, ಚೈತನ್ಯ ಗಣೇಶ್ ದಾಸ್, ಮಾಜಿ ಸದಸ್ಯರಾದ ಜನಾರ್ದನ ಬೊಂಡಾಲ, ಗಂಗಾಧರ್ ಪೂಜಾರಿ, ಪಕ್ಷದ ಪ್ರಮುಖರಾದ ಮಚ್ಚೇಂದ್ರನಾಥ ಸಾಲಿಯಾನ್, ಗಿರಿಧರ ಬಾಳಿಗಾ, ಪ್ರಣಾಮ್ ಅಜ್ಜಿಬೆಟ್ಟು ಮತ್ತಿತರರು ಇದ್ದರು.
ಇದಕ್ಕೂ ಮೊದಲು ಆರ್ಎಸ್ಎಸ್ ಹಿರಿಯ ಕಾರ್ಯಕರ್ತರಾದ ಅಜೇಯ್ ಕೊಂಬ್ರಬೈಲ್ ಅವರ ನಿವಾಸದಲ್ಲಿ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ಪ್ರಯಕ್ತ ಬಿಜೆಪಿ ಮುಖಂಡರು, ಕಾರ್ಯಕರ್ತರು ಅವರ ತ್ಯಾಗ, ರಾಷ್ಟ್ರ ಪ್ರೇಮವನ್ನು ಸ್ಮರಿಸಿಕೊಂಡು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.