ತುರ್ತುಪರಿಸ್ಥಿತಿ ವಿರುದ್ಧ ಅಂದು ಹೋರಾಡಿದ ರಮಾನಾಥ ರೈ ಅವರು ಇಂದು ಆ ಹೋರಾಟಗಾರರನ್ನು ಅವಮಾನಿಸಿದ್ದಾರೆ: ಅರುಣ್ ಜಿ ಶೇಟ್

ತುರ್ತುಪರಿಸ್ಥಿತಿ ವಿರುದ್ಧ ಅಂದು ಹೋರಾಡಿದ ರಮಾನಾಥ ರೈ ಅವರು ಇಂದು ಆ ಹೋರಾಟಗಾರರನ್ನು ಅವಮಾನಿಸಿದ್ದಾರೆ: ಅರುಣ್ ಜಿ ಶೇಟ್

ಮಂಗಳೂರು: ಇಂದಿರಾಗಾಂಧಿ ಅವರು ತನ್ನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ತೀರ್ಪು ಬಂದು ಅಧಿಕಾರ ದುರ್ಬಳಕೆ ಮಾಡಿದ ಪರಿಣಾಮ ಅನರ್ಹತೆಗೆ ಒಳಗಾದಾಗ, ಅಧಿಕಾರವನ್ನು ಉಳಿಸಿಕೊಳ್ಳಲು ಮಾಡಿದ ಮೊದಲ ಕೆಲಸವೇ ತನ್ನ ಸ್ವಾರ್ಥಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರರು ರಚಿಸಿದ ಸಂವಿಧಾನದ ಆಶಯವನ್ನೇ ಹತ್ಯೆ ಮಾಡಿ ದೇಶದಾದ್ಯಂತ ತುರ್ತುಪರಿಸ್ಥಿತಿ ಹೇರಿದ್ದರು. 

ಈ ಮೂಲಕ ತನ್ನ ವಿರೋಧಿಗಳನ್ನು ಕ್ರೌರ್ಯದಿಂದ ಹತ್ತಿಕ್ಕಿ ಎಂಐಎಸ್‌ಎ ಹಾಗೂ ಡಿಐಆರ್ ಆಕ್ಟ್ ಅನ್ನು ಹಾಕಿಸಿ ಜೈಲಿಗೆ ಅಟ್ಟಿದ್ದರು. ರಾಹುಲ್ ಗಾಂಧೀ ಪರಿವಾರದೊಂದಿಗೆ ತಮ್ಮ ಅಂಧಭಕ್ತಿ ಪ್ರದರ್ಶಿಸಿದ ರಮಾನಾಥ ರೈ ಅವರು, ಈ ಹಿಂದೆ ಇದೇ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದು ಮರೆತಿದ್ದಾರೆ. ಅಥವಾ ಯಾವುದೋ ಅಧಿಕಾರ ಪಡೆಯುವ ಹಂಬಲದಿಂದ ತಮ್ಮ ಆತ್ಮ ಸಾಕ್ಷಿ ವಿರುದ್ಧ ಹೋಗಿದ್ದಾರೆ ಅಂದರೆ ಇದು ಅತ್ಯಂತ ಖೇದಕರ ವಿಚಾರ.

ರಮಾನಾಥ ರೈ ಅವರು ತುರ್ತು ಪರಿಸ್ಥಿತಿ ಜಾರಿಯಿಂದ ದ.ಕ. ಜಿಲ್ಲೆಗೆ ಯಾವುದೇ ಕೆಡುಕಾಗಲಿಲ್ಲಾ ಎಂದು ಹೇಳಿದ್ದಾರೆ. ಅಂದು ದ.ಕ. ಜಿಲ್ಲೆಯಲ್ಲಿ ಅವ್ಯಾಹತವಾಗಿ ಪೊಲೀಸರ ಕೈ ಇಂದ ದೌರ್ಜನ್ಯ ನಡೆಸಿದ ಅಂದಿನ ಕಾಂಗ್ರೇಸ್ ಯಾವುದೇ ಕಾರಣವಿಲ್ಲದೆ ಸುಖಾಸುಮ್ಮನೆ 500ಕ್ಕೂ ಹೆಚ್ಚು ಮುಖಂಡರನ್ನು ಸೆರೆಗೆ ತಳ್ಳಿತ್ತು. ಅಲ್ಲಿ ಥರ್ಡ್ ಡಿಗ್ರಿ ಹಾಗೂ ಎರೋಪ್ಲೇನ್ ನಂತಹ ನರಕಯಾತನೆಯನ್ನು ನೀಡಿತ್ತು. ಕೆಲವರನ್ನು ಗೋಡೆಗೆ ಬಡಿಯುವುದು ಬೂಟೂ ಕಾಲಿನಿಂದ ಒದೆಯುವ ಫುಟ್ಬಾಲ್ ಶಿಕ್ಷೆ. ಕಬ್ಬಿಣದ ಮೊಳೆಯಿರುವ ಲಾಠಿ ಏಟು ಹೀಗೆ ಅನೇಕ ಯಾತನೆಗಳು. ಹಲವರು ಈ ಯಾತನೆ ತಾಳಲಾರದೆ ತಮ್ಮ ಪ್ರಾಣವನ್ನು ಬಿಟ್ಟರು. ಮಧುಕರ್ ಅವರನ್ನಂತೂ ಬಂದರ್ ಪೊಲೀಸ್ ಸ್ಟೇಷನ್‌ನ ಮಾಳಿಗೆಯ ಎತ್ತರದಿಂದ ಕೆಳಕ್ಕೆ ತಳ್ಳಿದ್ದರ ಪರಿಣಾಮ ಕಾಲು ಮುರಿದುಕೊಂಡು ವರ್ಷಾನುಗಟ್ಟಲೆ ಆಸ್ಪತ್ರೆಯಲ್ಲಿದ್ದರು ಸರಕಾರದಿಂದ ಯಾವುದೇ ಸಹಕಾರವೂ ದೊರೆಯಲಿಲ್ಲ.

ನಾಗೇಶ್ ಶೇಟ್ ಅವರಿಗೆ ಅಂದು ಪೊಲೀಸರು ಹೊಡೆದ ಏಟಿಗೆ ಇಂದಿಗೆ ಐವತ್ತು ವರ್ಷ ಕಳೆದರೂ ಆ ನೋವು ನಿರಂತರ ಭಾಧಿಸುತ್ತಿದೆ. ಅಂದಿನ ಕಾಂಗ್ರೇಸ್ ಸರಕಾರ ಪ್ರಾಯೋಜಿತ ದೌರ್ಜನ್ಯಕ್ಕೆ ತೊಟ್ಟಿಲ ಮಗುವೂ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡಿತ್ತು. ಮಾಧ್ಯಮದ ಸ್ವಾತಂತ್ರ್ಯದ ಹರಣಮಾಡಿ ತಮಗೆ ಬೇಕಾದ ಸುದ್ದಿಗಳನ್ನು ಮಾತ್ರವೇ ಪತ್ರಿಕೆಗಳಿಗೆ ಪ್ರಕಟಿಸಲು ಅವಕಾಶ ಮಾಡಿತ್ತು. ಅನೇಕರು ಜೈಲಿನಲ್ಲೇ ಕೊನೆ ಉಸಿರೆಳೆದರು. ಅನೇಕರು ಕಣ್ಮರೆಯಾದರು. ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಾಯಕರು ಅದೆಷ್ಟಿದ್ದಾರೋ ಅದಕ್ಕಿಂತ ಪೋಲಿಸರ ಕೈಗೆ ಸಿಗದೇ ಭೂಗತವಾಗಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದರು.

ದ.ಕ. ಜಿಲ್ಲೆಯ ಆ ಹೋರಾಟಗಾರರು ಹಾಗೂ ಹುತಾತ್ಮರನ್ನು ನೆನೆಸಿಯಾದರೂ ರಮಾನಾಥ ರೈ ಅವರು ಇಂತಹ ಕಪಟ ಹೇಳಿಕೆ ನೀಡಬಾರದಿತ್ತು. ಇಂದಿರಾಗಾಂಧಿ ಅವರು ಅಂದಿನ ನ್ಯಾಯಾಲಯದ ತೀರ್ಪಿನಿಂದ ತಮ್ಮ ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದ ಕಾರಣ ಇಡೀ ದೇಶವನ್ನು ತುರ್ತುಪರಿಸ್ಥಿತಿಯ  ಕರಾಳ ಕೂಪಕ್ಕೆ ತಳ್ಳಿ ಸಂವಿಧಾನದ ಹತ್ಯೆ ಮಾಡಿದ್ದರು. ನೀವು ಹೇಳಿದ ಸುಳ್ಳಿನಂತೆ ಯಾವುದೇ ಸುಧಾರಣೆಗಾಗಿ ತುರ್ತುಪರಿಸ್ಥಿತಿ ಹೇರಿದ್ದಲ್ಲ. ನಿಮ್ಮ ಈ ಹೇಳಿಕೆಯನ್ನು ದ.ಕ. ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article