
ದಲಿತ ಕುಂದು ಕೊರತೆ ಸಭೆ: ಎಸ್ಸಿ-ಎಸ್ಟಿ ಜಾಗದ ಪಕ್ಕ ತ್ಯಾಜ್ಯ ಘಟಕಕ್ಕೆ ವಿರೋಧ
ಮಂಗಳೂರು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಗ್ರಾಮದ ಎಸ್ಸಿ-ಎಸ್ಟಿ ಜಾಗದ ಪಕ್ಕದಲ್ಲಿ ಮೂಲ್ಕಿ ಪ.ಪಂಚಾಯತ್ ತ್ಯಾಜ್ಯ ಘಟಕ ನಿರ್ಮಿಸಲು ತಯಾರಿ ನಡೆಯುತ್ತಿದೆ. ಒಂದು ವೇಳೆ ಘಟಕ ನಿರ್ಮಾಣವಾದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯ ಮುಖಂಡರು ತಿಳಿಸಿದರು.
ರವಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಜೂನ್ ತಿಂಗಳ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಯಿತು.
ಸ್ಥಳೀಯರಾದ ಗಂಗಾಧರ ಮರಾಟಿ ಮಾತನಾಡಿ, ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದ ಪಕ್ಕದಲ್ಲೇ ಬಹುಗ್ರಾಮ ಕುಡಿಯುವ ನೀರಿನ ಸಂಸ್ಕರಣೆ, ಸರಬರಾಜು ಘಟಕವಿದೆ. ಕೆಲವೇ ಮೀಟರ್ಗಳ ಅಂತರದಲ್ಲಿ ಸುಮರು 1.48 ಎಕರೆ ವಿಸ್ತೀರ್ಣದ “ರಾಪಾಯಿ ಕೆರೆ’ ಇದೆ. ಇದು ಸ್ಥಳೀಯ ಕೃಷಿಕರಿಗೂ ನೀರಿನ ಮೂಲವಾಗಿದ್ದು, ಘಟಕ ನಿರ್ಮಾಣವಾದರೆ ನೀರಿನ ಮೂಲವೂ ಕಲುಷಿತವಾಗಲಿದೆ. ಇಲ್ಲಿ 12 ಎಸ್ಸಿ ಕುಟುಂಬಗಳು ವಾಸವಾಗಿದ್ದು, ಇತರ ಸಮುದಾಯಗಳ ಮನೆಯೂ ಸಾಕಷ್ಟಿವೆ. 3 ಎಕರೆ ಜಾಗದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಉದ್ದೇಶಿಸಿಸಲಾಗಿದ್ದು, ಸ್ಥಳೀಯ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗವನ್ನು ಆರ್ಟಿಸಿಯಲ್ಲಿ ಪ.ಪಂ. ಜಾಗ ಎಂದು ಬದಲಾಯಿಸಲಾಗಿದೆ ಎಂದರು.
2005ರಲ್ಲಿ ಪಂಚಾಯತ್ನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಶಾಸಕರು, ಆರ್ಐ, ವಿಎ ಎಲ್ಲರಿಗೂ ಈ ವಿಚಾರ ಗೊತ್ತಿದೆ. ಇದರ ಹೊರತಾಗಿಯೂ ಇಲ್ಲಿ ಘಟಕ ನಿರ್ಮಾಣ ಮಾಡಿದರೆ ಹೋರಾಟ ನಡೆಸಲಾಗುವುದು ಎಂದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಉತ್ತರಿಸಿ, ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆ ಹರಿಸು ವಂತೆ ಸೂಚಿಸಲಾಗುವುದು ಎಂದರು.
ಪರಿಶಿಷ್ಟರಿಗೆ ಮೀಸಲಾದ ಪಿವಿಎಸ್ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲಿ ಪರಿಶಿಷ್ಟರಿಗೆ ಅಂಗಡಿ ಕೋಣೆ ಬಾಡಿಗೆಗೆ ಕೇಳಿದರೆ ಸಿಗುವುದಿಲ್ಲ. ಕಟ್ಟಡ ಅಪಾಯಕಾರಿಯಾಗಿದೆ ಎಂದು ಎನ್ಐಟಿಕೆ ವರದಿ ನೀಡುತ್ತಾರೆ. ಆದರೆ ಕಟ್ಟಡದಲ್ಲಿ ಟೂರಿಸ್ಟ್ ಬಸ್ಗಳ ಕಚೇರಿಗಳಿವೆ. ಪರಿಶಿಷ್ಟರಿಗೆ ಮೀಸಲಾದ ಕಟ್ಟಡವನ್ನು ಟೂರಿಸ್ಟ್ ಸಂಸ್ಥೆಯವರಿಗೆ ಯಾಕೆ ನೀಡಲಾಗಿದೆ ಎಂದು ಸುಧಾಕರ್ ಬೋಳೂರು ಪ್ರಶ್ನಿಸಿದರು.
ಪ್ರತಿ ಮೂರನೇ ಶನಿವಾರ ಎಲ್ಲ ಠಾಣೆಗಳಲ್ಲಿ ದಲಿತ ಕಂದುಕೊರತೆ ಸಭೆ ಆಯೋಜಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಭೆ ಆಯೋಜಿಸಬೇಕು ಎಂದು ಮುಕೇಶ್ ಆಗ್ರಹಿಸಿದರು.
ಮೂಡುಬಿದಿರೆ ಸಂತೆಯಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದು, ಟೇಬಲ್ ಇಟ್ಟು ರಾಜರೋಷವಾಗಿ ಆಟವಾಡುತ್ತಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ರಾಮಚಂದ್ರ ಆರೋಪಿಸಿದರು.
ಎಸ್ಸಿಯವರಿಗೆ ಕಟ್ಟಡವನ್ನು ನೀಡಲಾಗಿದ್ದು, ಅವರು ಅದನ್ನು ಬೇರೆಯವರಿಗೆ ನಡೆಸಲು ಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಅಡಿಗ ತಿಳಿಸಿದರು. ಹಾಗಾದರೆ ಅದು ದುರುಪಯೋಗವಾಗಿದ್ದು, ಅಂತಹವರ ಪರವಾನಿಗೆ ರದ್ದು ಮಾಡಬೇಕು ಎಂದು ಇತರ ಮುಖಂಡರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿ ಸಭೆಗೆ ವಿವರಿಸಿದರು.
ಸಂಚಾರ ವಿಭಾಗದ ಇನ್ಸ್ಪೆಕ್ಟರ್ ಗೋಪಾಲಕೃಷ್ಟ ಭಟ್ ಮಾತನಾಡಿ, ಟ್ರಾವೆಲ್ಸ್ ಸಂಸ್ಥೆಗಳಿಂದಾಗಿ ಪಿವಿಎಸ್ ಭಾಗದಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಅನಧಿಕೃತವಾಗಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೆ ಅವುಗಳನ್ನು ಪರವಾನಿಗೆ ರದ್ದು ಮಾಡಿ ಎಂದರು. ಎಸ್ಪಿ ಆನಂದ ಮಾತನಾಡಿ, ಕಲ್ಲಮುಂಡ್ಕೂರು ದಲಿತ ಕಾಲಿನಿಗೆ ರುದ್ರಭೂಮಿ ನಿರ್ಮಾಣಕ್ಕೆ 4 ವರ್ಷದ ಹಿಂದೆ 10 ಸೆಂಟ್ಸ್ ಜಾಗ ಮಂಜೂರಾಗಿತ್ತು. ಆದರೆ ಶೆಡ್, ಆವರಣ ಗೋಡೆ ನಿರ್ಮಿಸಿಲ್ಲ. ಶೀಘ್ರ ಮೂಲಕ ಸೌಕರ್ಯ ಕಲ್ಪಿಸಲು ಆಗ್ರಹಿಸಿದರು.
ಹೆಲ್ಮೆಟ್ ಇಲ್ಲದೆ ಚಾಲನೆ ಹೆಚ್ಚಳ:
ಜಗದೀಶ್ ಪಾಂಡೇಶ್ವರ ಮಾತನಾಡಿ, ಪಾಂಡೇಶ್ವರದಲ್ಲಿ ಹೆಲ್ಮೆಟ್ ಹಾಕದೆ 3-4 ಮಂದಿ ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾರೆ ಎಂದು ಆರೋಪಿಸಿದರು. ಡಿಸಿಪಿ ರವಿಶಂಕರ್ ಪ್ರರಕಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದರು.
ಡಿಸಿಆರ್ಇ ಎಸ್ಪಿ ಸೈಮನ್ ಅವರು ಅಹ ವಾಲುಗಳನ್ನು ಆಲಿಸಿದರು. ಎಸಿಪಿ ಶ್ರೀಕಾಂತ್ ನಿರೂಪಿಸಿದರು.