ತೊಂಬಟ್ಟು-ಕಬ್ಬಿನಾಲೆ ಸಂಪರ್ಕ ಸೇತುವೆ ತುರ್ತು ನಿರ್ಮಾಣ ಮಾಡಲು ಸೂಕ್ತ ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಶಾಸಕ ಮಂಜುನಾಥ ಭಂಡಾರಿ ಒತ್ತಾಯ

ತೊಂಬಟ್ಟು-ಕಬ್ಬಿನಾಲೆ ಸಂಪರ್ಕ ಸೇತುವೆ ತುರ್ತು ನಿರ್ಮಾಣ ಮಾಡಲು ಸೂಕ್ತ ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಶಾಸಕ ಮಂಜುನಾಥ ಭಂಡಾರಿ ಒತ್ತಾಯ


ಉಡುಪಿ: ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು- ಕಬ್ಬಿನಾಲೆ ಸಂಪರ್ಕ ಸೇತುವೆಯನ್ನು ತುರ್ತು ನಿರ್ಮಾಣ ಮಾಡುವ ಕುರಿತು ಕಾರ್ಯಸಾಮರ್ಥ್ಯದ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಯಿಂದ ನಡೆಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಪ್ರಕೃತಿ ವಿಕೋಪ ಯೋಜನೆಯಡಿ ಹೊಸದಾಗಿ ಸೇತುವೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಅವರಿಗೆ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಪತ್ರ ಮುಖೇನ ಒತ್ತಾಯಿಸಿದ್ದಾರೆ. 

ಈಗಿರುವ ಸೇತುವೆ ಶಿಥಿಲಗೊಂಡಿದ್ದು ಹದಗೆಟ್ಟಿರುವ ಮಣ್ಣಿನ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಓಡಾಡಬೇಕು. ಮಳೆಗಾಲದಲ್ಲಿ ನದಿ ತುಂಬಿ ತುಳುಕುವ ಜತೆಯಲ್ಲಿ ಸೇತುವೆಯ ಮೇಲ್ಬಾಗದಲ್ಲೂ ನೀರು ಹರಿಯುವ ಸನ್ನಿವೇಶ ಸೃಷ್ಟಿಯಾಗುತ್ತಿದ್ದು, ಜನರು ಜೀವ ಭಯದಲ್ಲೇ ಓಡಾಡಬೇಕಾಗುತ್ತದೆ. ಹೊಸಂಗಡಿ ಮೂಲಕ ಭಾಗೀಮನೆ ತೊಂಬಟ್ಟು ಸಂಪರ್ಕದ ಕಬ್ಬಿನಾಲೆ-ಇರ್ಕಿಗದ್ದೆ-ಮೂಡುಕಂಪ-ಶೇಡಿಗದ್ದೆ- ಮಾವಿನಕೊಂಬೆ ಪ್ರದೇಶದ 250 ಮಿಕ್ಕಿ ಮನೆಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಮತ್ತು ಸೇತುವೆ ಇದಾಗಿದೆ. ಮಳೆಗಾಲ ಬಂತೆಂದರೆ ಆ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕಚೇರಿ ಕೆಲಸ ಕಾರ್ಯಗಳಿಗೆ ತೆರಳುವ ಜನತೆಗೆ ಪೇಟೆ ಪಟ್ಟಣಗಳನ್ನು ತಲುಪಬೇಕಾದರೆ ಆಮಾಸೆಬೈಲ್ ಮೂಲಕ ಸುತ್ತುವರಿದು ಸಂಚರಿಸಬೇಕಾಗಿದೆ.

ವರ್ಷಂಪ್ರತಿ ಸ್ಥಳೀಯರಿಂದ ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ರಸ್ತೆಯನ್ನು ಸರಿಪಡಿಸಿ ಕೊಂಡು ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ. ವಿಪರೀತ ಮಳೆ ಸಂದರ್ಭ ಸೇತುವೆಗೆ ಸಮನಾಗಿ ಮಳೆ ನೀರು ಹರಿದು ಹೋಗುವ ಕಾರಣ ಅಲ್ಲಿನ ಜನತೆ ಸಂಪರ್ಕದ ಕಡಿತದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಅವರು ತಕ್ಷಣವೇ ಗ್ರಾಮಸ್ಥರ ರಕ್ಷಣೆಗೆ ಬೇಕಾದ ಅಗತ್ಯ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ ಭಂಡಾರಿ ಅವರು ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article