ರಾಜ್ಯ ಸರಕಾರ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ: ಕ್ಯಾ. ಬ್ರಿಜೇಶ್ ಚೌಟ

ರಾಜ್ಯ ಸರಕಾರ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ: ಕ್ಯಾ. ಬ್ರಿಜೇಶ್ ಚೌಟ


ಉಜಿರೆ: ಜಿಲ್ಲೆಗೆ ಬೇಕಾದ ಮೂಲ ಸೌಕರ್ಯ ನೀಡದ, ಕಾನೂನು ಸುವ್ಯವಸ್ಥೆಗಳನ್ನು ಕಾಪಾಡದ ರಾಜ್ಯ ಸರಕಾರ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಜಿಲ್ಲೆಯ ಜನರ ಮೇಲೆ ದ್ವೇಷ ಸಾಧಿಸುತ್ತಾ ಜಿಹಾದಿ ಮಾನಸಿಕತೆಯ ಅಧಿಕಾರ ನಡೆಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ವಿಚಿತ್ರ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸ್ಥಿತಿ ಉಂಟಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಅವರು ಜೂ.21 ರಂದು ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಜಿಲ್ಲೆಗೆ ಮಾದರಿಯಾಗಿದ್ದು ಎಲ್ಲಾ ಚುನಾವಣೆಗಳಲ್ಲೂ ಪಕ್ಷಕ್ಕೆ ಶಕ್ತಿಯನ್ನು ತುಂಬುತ್ತಿದೆ. ಇಲ್ಲಿಯ ಕಾರ್ಯಕರ್ತರ ಬದ್ಧತೆ ಶ್ಲಾಘನೀಯ. ಕೇಂದ್ರ ಸರಕಾರದ ಪ್ರತಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುತ್ತಿವೆ. ರಾಷ್ಟ್ರ ವಿರೋಧಿಗಳಿಗೆ ಕೇಂದ್ರ ಸರಕಾರ ರಾಮಬಾಣವಾಗಿದೆ ಎಂದು ಹೇಳಿದರು.

ಬೆಳ್ತಂಗಡಿ ಹರೀಶ್ ಪೂಂಜ ಮಾತನಾಡಿ, ಕೇಂದ್ರ ಸರಕಾರವು ತಾಲೂಕಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 1,500 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ನೀಡಿದೆ. ಆದರೆ ರಾಜ್ಯ ಸರಕಾರ ಕಳೆದ ಅವಧಿಯಲ್ಲಿ ಬಿಡುಗಡೆಗೊಂಡ ಅನುದಾನವನ್ನು ವಾಪಸು ಪಡೆದು ಅನ್ಯಾಯ ಮಾಡಿದೆ. ಮೋದಿ ಸರಕಾರವು ಕಳೆದ 11 ವರ್ಷಗಳಲ್ಲಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದ್ದು, ಇದು ಜಗತ್ತಿನ ಜನರೇ ಮೆಚ್ಚುವಂತಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿ ಬಗ್ಗೆ ಕೇಂದ್ರ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಪ್ರತಿ ಯೋಜನೆಗಳು ಬೂತ್ ಮಟ್ಟವನ್ನು ತಲುಪಿವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆಳ್ವ, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಕಾರ್ಯದರ್ಶಿ ವಸಂತಿ ಮಚ್ಚಿನ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ, ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ನಾವೂರು ವಂದೇ ಮಾತರಂ ಗೀತೆ ಹಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿ, ಪ್ರಶಾಂತ್ ಪಾರೆಂಕಿ ವಂದಿಸಿದರು. ಲಾಯಿಲ ಗ್ರಾಮ ಪಂಚಾಯತಿ ಸದಸ್ಯ ಅರವಿಂದ ಲಾಯಿಲ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article