
"ಆಸಾಡಿ ಒಡ್ರ್": ಸಾಧಕ ಪುರಸ್ಕಾರಕ್ಕೆ ಸಾಂಸ್ಕೃತಿಕ ಚಿಂತಕಿ ಭಾರತಿ ವಿ.ಮಯ್ಯ ಆಯ್ಕೆ
Friday, July 11, 2025
ಕುಂದಾಪುರ: ಬ್ರಹ್ಮಾವರ ತಾಲೂಕು ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ "ಆಸಾಡಿ ಒಡ್ರ್" ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಅಗಸ್ಟ್ 1೦ ರ ಭಾನುವಾರ ಬೆಳಗ್ಗೆ 9ರಿಂದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು.
ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಹಾಗೂ ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ, ಅನಾಥಾಶ್ರಮಕ್ಕೆ ನೆರವು, ಸ್ನೇಹಕೂಟ ಮಣೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗೆಳೆಯರ ಬಳಗ ಹಂದಟ್ಟು ,ಹಾಗೂ ಹಂದಟ್ಟು ಮಹಿಳಾ ಬಳಗ ಕೋಟ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ,ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.