‘ಸಾಮೂಹಿಕ ಸಮುದ್ರ ಪೂಜೆ’
Tuesday, August 5, 2025
ಮಂಗಳೂರು: ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ (ಕದ್ರಿ) ವತಿಯಿಂದ ಮೀನುಗಾರಿಕೆಯ ಋತು ಆರಂಭದಲ್ಲಿ ಮೀನುಗಾರಿಕೆಗೆ ಪೂರಕವಾಗಿ ಗಂಗಾಮಾತೆಗೆ ಆ.9 ರಂದು ಬೆಳಗ್ಗೆ 10ಕ್ಕೆ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ‘ಸಾಮೂಹಿಕ ಸಮುದ್ರ ಪೂಜೆ’ ಶ್ರೀ ಕ್ಷೇತ್ರ ಕದ್ರಿ ಕದಳಿ ಮಠದ ಮಠಾಧಿಶರಾದ ಶ್ರೀ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರಿಂದ ನಡೆಯಲಿದೆ.
ಬೊಕ್ಕಪಟ್ಣ ಮೊಗವೀರ ಗ್ರಾಮಸಭಾ ಗುರಿಕಾರ ವಿಶುಕುಮಾರ್, ಬೋಳಾರ ಶ್ರೀ ಹಳೇ ಕೋಟೆ ಮುಖ್ಯಪ್ರಾಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಸದಸ್ಯ ಕಿಶನ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶ್ರಾವಣ ಮಾಸದ ಪ್ರಥಮ ಸೋಮವಾರದಂದು ಪ್ರತಿವರ್ಷವೂ ಜರಗುವಂತೆ ಕದ್ರಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಕ್ಷೇತ್ರ ಸುವರ್ಣ ಕದಳೀ ಮಠದಲ್ಲಿ ಆ.18ರಂದು ಬೆಳಗ್ಗೆ 8.30ಕ್ಕೆ ಸೀಯಾಳಾಭಿಷೇಕ ಜರಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.