ಜಾರಿ ಬಿದ್ದು ಪದ್ಮಶ್ರೀ ಹಾಜಬ್ಬರಿಗೆ ಗಾಯ
Friday, August 22, 2025
ಉಳ್ಳಾಲ: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಕಳೆದ ಆ.18ರಂದು ಮನೆಯಂಗಳದಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಬೆಳಗ್ಗೆ ಹಾಜಬ್ಬ ಅವರು ಮನೆಯಂಗಳಕ್ಕೆ ಕಾಲಿಡುತ್ತಲೇ ಜಾರಿ ಬಿದ್ದಿದ್ದರು. ಹಿಮ್ಮುಖವಾಗಿ ಬಿದ್ದ ಪರಿಣಾಮ ತಲೆಯ ಹಿಂಬಾಗ ಒಡೆದು ಧಾರಾಕಾರ ರಕ್ತ ಹರಿದಿತ್ತು.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಹೊಲಿಗೆ ಹಾಕಲಾಗಿದೆ. ಮನೆಯಲ್ಲಿ ಇಬ್ಬರು ಹೆಣ್ಮಕ್ಕಳ ಹೊರತು ಬೇರೆ ಯಾರೂ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗಲು ಹಿಂದೇಟು ಹಾಕಿದ್ದರಿಂದ ಮನೆಗೆ ಕಳಿಸಲಾಗಿತ್ತು. ತಲೆಗೆ ಪೆಟ್ಟು ಬಿದ್ದ ಸಂದರ್ಭ ರಕ್ತ ಹೋಗದಿದ್ದರೆ ಜೀವಕ್ಕೆ ಅಪಾಯ ಎದುರಾಗುವ ಆತಂಕ ಇತ್ತು. ರಕ್ತ ಹೋಗಿರುವುದರಿಂದ ಒಳಭಾಗಕ್ಕೆ ಪೆಟ್ಟಾಗಿಲ್ಲ ಎನ್ನುವುದು ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಪ್ರಸ್ತುತ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದರೂ ಪಿಯು ಕಾಲೇಜು ನಿರ್ಮಾಣದ ಜಪದಲ್ಲೇ ಇದ್ದಾರೆ.