ಅಪಪ್ರಚಾರ: ಕಠಿಣ ಶಿಕ್ಷೆಗೊಳಪಡಿಸಿ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅಪಪ್ರಚಾರ ಸೃಷ್ಟಿಸಿರುವವರ ಹಿಂದೆ ಇರುವ ಧರ್ಮ ವಿರೋಧಿ ಶಕ್ತಿಗಳ ಬಗ್ಗೆ ಸಿಬಿಐ ಅಥವಾ ಎನ್ಐಎಯಿಂದ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ಅಧ್ಯಕ್ಷ ಡಾ.ಸಂಪತ್ ಕುಮಾರ್, ರಾಜ್ಯ ಅಧ್ಯಕ್ಷ ವೆಂಕಟೇಶ್ ಹೇಳಿದರು.
ಕ್ಷೇತ್ರದ ಸತ್ಕಾರ್ಯಗಳನ್ನು ಸಹಿಸದ ಸಮಾಜದ ಧಾರ್ಮಿಕ ವಿರೋಧಿಗಳು ಅಪಪ್ರಚಾರ ಮಾಡಿ ಸಮಾಜದ ಬಹುಸಂಖ್ಯಾತ ಭಕ್ತರ ಮನೋಭಾವನೆಗಳಿಗೆ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ರಾಜ್ಯ ಸರ್ಕಾರ ಯಾರೋ ಒಬ್ಬ ಅನಾಮಿಕ ದೂರು ನೀಡಿದ ತಕ್ಷಣ ಸ್ಪಂದಿಸಿ ಎಸ್ಐಟಿ ರಚನೆ ಮಾಡಿ ಶ್ರೀಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ಕ್ಷೇತ್ರಕ್ಕೆ ಅಗೌರವ ಉಂಟು ಮಾಡಲಾಗಿದೆ. ಧರ್ಮ ವಿರೋಧಿ ಶಕ್ತಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಕಠಿಣಶಿಕ್ಷೆಗೆ ಗುರಿಪಡಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಮಿತಿ ಪ್ರಮುಖರಾದ ರವಿ ಕುಮಾರ್ ಎಂ.,ವೆಂಕಟೇಶ್, ರಾಘವೇಂದ್ರ ಯಾದವ್, ಲಕ್ಷಣ ಗೌಡ, ಪೆರುವಾಳ್, ಶಂಕರ ಗೌಡ ಪಾಟೀಲ, ಪುಷ್ಪಾ ಉಪಸ್ಥಿತರಿದ್ದರು.