ಪುಂಚಮೆ ಅನಧಿಕೃತ ಮಸೀದಿ ನಿರ್ಮಿಸಿ ಅಕ್ರಮವಾಗಿ ಧ್ವನಿವರ್ಧಕ ಬಳಕೆ ತೆರವಿಗೆ ಹಿ.ಜಾ.ವೇ. ಡಿವೈಎಸ್ಪಿಗೆ ಮನವಿ
ಬಂಟ್ವಾಳ: ತಾಲೂಕಿನ ಪುಂಚಮೆ ಎಂಬಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಸಿ ಅಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಧ್ವನಿವರ್ಧಕವನ್ನು ಬಳಸಿ ಅಜಾನ್ ಕೂಗಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದ್ದು, ತಕ್ಷಣ ಪೊಲೀಸ್ ಇಲಾಖೆ ತೆರವುಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ಹಿಂದು ಜಾಗರಣ ವೇದಿಕೆಯ ಪೊಳಲಿ ವಲಯದ ವತಿಯಿಂದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಯವರಿಗೆ ಮನವಿ ಸಲ್ಲಿಸಿದೆ.
ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆನಂಬ್ರ 152-2ಎ1ರಲ್ಲಿ ಪ್ರಾರ್ಥನಾ ಹಾಲ್ ಹಾಗೂ ಕ್ಲಾಸ್ ರೂಮ್ ಜುಮ್ಮಾ ಸೇರಿ 105.40 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ಮಾತ್ರ ಪರವಾನಿಗೆಯನ್ನು ಪಡೆದು ಪ್ರಸ್ತುತ ಪ್ರಾರ್ಥನಾ ಹಾಲ್ ಹಾಗೂ ಕ್ಲಾಸ್ ರೂಮ್ ಜುಮ್ಮಾ ಕಟ್ಟಡ ನಿರ್ಮಾಣದ ಜೊತೆಗೆ ಬಹುಮಹಡಿ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕರಿಯಂಗಳ ಗ್ರಾಮದ ಗ್ರಾಮಸ್ಥರು ಈ ಜಾಗದ ಸುತ್ತಲು ನಿರ್ಮಿಸಿರುವ ಆವರಣ ಗೋಡೆಯು ಎತ್ತರದಲ್ಲಿದ್ದು ಅಪಾಯಕಾರಿಯಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಈ ಹಿಂದೆ ಮನವಿ ಕೂಡ ಸಲ್ಲಿಸಿದ್ದು, ಪಿಡಿಒ ಅವರು ಈ ಬಗ್ಗೆ ನೋಟಿಸು ಕೂಡ ಜಾರಿಗೊಳಿಸಿದ್ದಾರೆ. ಆದರೆ ಪಂಚಾಯತ್ ನೀಡಿರುವ ನೋಟಿಸನ್ನು ಲೆಕ್ಕಿಸದೆ ಅಕ್ರಮವಾಗಿ ಆವರಣ ಗೋಡೆ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಅಕ್ರಮ ಬಹುಮಹಡಿ ಕಟ್ಟಡದ ಮೇಲ್ಗಡೆಯಲ್ಲಿ ಧ್ವನಿವರ್ಧಕವನ್ನು ಅಳವಡಿಸಿ ಆಜಾನ್ ಕೂಗುತ್ತಿದ್ದು, ಇದರಿಂದಾಗಿ ಆಸುಪಾಸಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಈ ಮೊದಲೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡು ಧ್ವನಿವರ್ಧಕ ತೆರವುಗೊಳಿಸಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಕರಿಯಂಗಳ ಗ್ರಾಮಸ್ಥರು ಸೇರಿ ಬೃಹತ್ ‘ಪುಂಚಮೆ ಚಲೋ’ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಹಿ.ಜಾ.ವೇ.ಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುಷ್ಪರಾಜ್ ಕಮ್ಮಾಜೆ ಮತ್ತಿತರರು ಉಪಸ್ಥಿತರಿದ್ದರು.