ಈ ಬಾರಿಯೂ ಪಾಲಿಕೆ ವತಿಯಿಂದಲೇ ದಸರಾ ದೀಪಾಲಂಕಾರ: ಶಾಸಕ ಕಾಮತ್
Tuesday, September 9, 2025
ಮಂಗಳೂರು: ಮುಂಬರುವ ಪ್ರಸಿದ್ಧ ಮಂಗಳೂರು ದಸರಾ ಹಬ್ಬವು ಇಡೀ ನಮ್ಮ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು, ದೇಶ ವಿದೇಶಗಳಿಂದ ಭಕ್ತರು, ಪ್ರವಾಸಿಗರ ದಂಡೇ ಹರಿದು ಬರಲಿದ್ದು, ಈ ವೇಳೆ ಇಡೀ ನಗರಕ್ಕೆ ಹಿಂದಿನಂತೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂಬ ನಮ್ಮ ವಿಶೇಷ ಮನವಿಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಟೆಂಡರ್ ಪ್ರಕ್ರಿಯೆಯನ್ನು ಸಹ ಪ್ರಾರಂಭಗೊಳಿಸಲಾಗಿದೆ ಎಂದಿರುವುದು ಸ್ವಾಗತಾರ್ಹ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ನಗರದ ದೀಪಾಲಂಕಾರದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಳ್ಳುವುದರಿಂದ ದೇವಸ್ಥಾನಗಳ ಮೇಲಿನ ಆರ್ಥಿಕ ಹೊರೆ ತಗ್ಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ಜಿಲ್ಲಾಡಳಿತದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಹಾಗಾಗಿ ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪಾಲಿಕೆಯ ಮೇಲಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.