ಆತ್ಮವಿಶ್ವಾಸವೇ ಜೀವನದ ಅತಿ ದೊಡ್ಡ ಶಕ್ತಿ: ರೋಷನ್ ಲೂಯಿಸ್
Sunday, September 14, 2025
ಪುತ್ತೂರು: ‘ಯಶಸ್ಸಿಗೆ ಸ್ಪಷ್ಟ ಗುರಿ ಮತ್ತು ಅದನ್ನು ಸಾಧಿಸಲು ದೃಢವಾದ ಸಂಕಲ್ಪ ಅವಶ್ಯಕ. ಅನಗತ್ಯ ವಿಷಯಗಳಿಗೆ ಗಮನ ಹರಿಸದೆ, ನಿಮ್ಮ ಗುರಿಯ ಕಡೆಗೆ ಸಂಪೂರ್ಣವಾಗಿ ಗಮನ ನೀಡಿ’ ಎಂದು ಟ್ವೈಸರ್ ಮ್ಯಾನೇಜ್ಮೆಂಟ್ ಕಂ WLL, - ಬಹ್ರೈನ್ ಸಂಸ್ಥೆಯ ನಿರ್ದೇಶಕರಾದ ರೋಷನ್ ಲೂಯಿಸ್ ಹೇಳಿದರು.
ಇವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಮ್ಮಿಂಗಲ್ ಫೆಸ್ಟ್ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇವರು ರಸಾಯನಶಾಸ್ತ್ರದ ಬಗೆಗಿನ ಸಂಕೀರ್ಣ ವಿಷಯಗಳನ್ನು ಬದಿಗಿರಿಸಿ, ಜೀವನದ ಸಾರ ಮತ್ತು ಯಶಸ್ಸಿನ ಸೂತ್ರಗಳ ಕುರಿತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ‘ಜೀವನದ ರಸಾಯನ ಶಾಸ್ತ್ರವು ಗುರಿ ಮತ್ತು ಯಶಸ್ಸಿನ ಮಿಶ್ರಣ ಮಾತ್ರವಾಗಿರದೆ ಸಹಕಾರ, ಸಾಮರಸ್ಯಗಳೆಂಬ ಮಾನವೀಯ ಮೌಲ್ಯಗಳ ಸಮ್ಮಿಶ್ರಣವಾಗಿರಲಿ’ ಎಂದು ನುಡಿದರು.
ಐಕ್ಯೂಎಸಿ ಸಂಯೋಜಕರಾದ ಡಾ. ಎಡ್ವಿನ್ ಡಿ’ಸೋಜ ಅವರು ಸ್ವಾಗತಿಸಿ, ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಎನ್. ನಿರೂಪಿಸಿದರು. ಮಾನಸ ಮತ್ತು ತಂಡದವರು ಪ್ರಾರ್ಥಿಸಿ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮಾಲಿನಿ ಕೆ. ಅವರು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.