ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸವಾರನಿಗೆ ಗಾಯ
Sunday, October 12, 2025
ಬಂಟ್ವಾಳ: ವಿದ್ಯುತ್ ಚಾಲಿತ ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಬಿ.ಕಸಬಾ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ಬಂಟ್ವಾಳ ನಿವಾಸಿ ಆಲ್ವಿನ್ ಮಿನೇಜಸ್ (60) ಎಂದು ಹೆಸರಿಸಲಾಗಿದೆ.
ಇವರು ತನ್ನ ವಿದ್ಯುತ್ ಚಾಲಿತ ಸ್ಕೂಟರಿನಲ್ಲಿ ಕಡೂರು-ಬಿ.ಸಿ. ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬೆ ಜಂಕ್ಷನ್ ಮಾರ್ಗವಾಗಿ ಬಿ.ಸಿ. ರೋಡು ಕಡೆಗೆ ಬರುತ್ತಿರುವಾಗ ಭಂಡಾರಿಬೆಟ್ಟುವಿನಲ್ಲಿ ಡಿವೈಡರ್ ತೆರೆದ ಸ್ಥಳದಲ್ಲಿ ಸೂಚನೆ ನೀಡಿ ಸ್ಕೂಟರನ್ನು ಬಲಭಾಗಕ್ಕೆ ಯು- ಟರ್ನ್ ಮಾಡುತ್ತಿರುವಾಗ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಸವಾರ ಆಲ್ವಿನ್ ಮೆನೇಜಸ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.